
ಪುತ್ತೂರು: ನಗರಸಭೆಯ ಬನ್ನೂರು ಡಂಪಿಂಗ್ ಯಾರ್ಡ್ (ಲ್ಯಾಂಡ್ ಫಿಲ್ ಸೈಟ್) ಸಂಪೂರ್ಣ ಶೂನ್ಯ ತ್ಯಾಜ್ಯ ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಯೋಜನೆಗಳು ಕಾರ್ಯಗತಗೊಳ್ಳುತ್ತಿದ್ದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೋಮವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.
ಘಟಕದಲ್ಲಿ 1990ರಿಂದೀಚೆಗೆ ಸಂಗ್ರಹಗೊಂಡ ಸುಮಾರು 36775 ಟನ್ ಹಳೆಯ ತ್ಯಾಜ್ಯದ ರಾಶಿಯಿದ್ದು ವಿಲೇವಾರಿ ಮಾಡಲು ಮೆಗಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಲ್ಲಿ ₹ 3 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ 3600 ಟನ್ ಹಳೆಯ ತ್ಯಾಜ್ಯವನ್ನು ಸಂಸ್ಕರಿಸಿ 3 ಹಂತದಲ್ಲಿ ಬೇರ್ಪಡಿಸಲಾಗುತ್ತಿದೆ. ಮುಂದಿನ ಮಾರ್ಚ್ ವೇಳೆ ತ್ಯಾಜ್ಯ ಶೂನ್ಯ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಡಂಪಿಂಗ್ ಯಾರ್ಡ್ನಲ್ಲಿರುವ ಸಿಎನ್ಜಿ ಘಟಕ ಮತ್ತು ಎಂಆರ್ಎಫ್ ಘಟಕಗಳು ಕಾರ್ಯಾರಂಭ ಮಾಡುವ ಮೊದಲೇ ಹಳೆಯ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡಿದ್ದು ಸರಿಯಲ್ಲ. ಈ 2 ಘಟಕಗಳು ಕಾರ್ಯಾರಂಭಗೊಂಡ ಮೇಲೆ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಈಗಾಗಲೇ ಕಾರ್ಯಾದೇಶ ಕೊಟ್ಟು ಕೆಲಸ ಆರಂಭಗೊಂಡ ಕಾರಣ ನಿತ್ಯವೂ ಬರುತ್ತಿರುವ ತ್ಯಾಜ್ಯವನ್ನು ಯಾವ ಪಟ್ಟಿಗೆ ಸೇರಿಸುತ್ತೀರಿ ಎಂದು ಪ್ರಶ್ನಿಸಿದರು.
ಬಯೋ ಗ್ಯಾಸ್ ಘಟಕ:
ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋಟರಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕೃಷ್ಣ ಮುಳಿಯ ಗ್ರೀನ್ ಎಲ್ಎಲ್ಪಿ ಮತ್ತು ರೀಟ್ಯಾಪ್ ಸೊಲ್ಯೂಷನ್ ಸಂಸ್ಥೆಗಳು ಜಂಟಿಯಾಗಿ ಯಾರ್ಡ್ನಲ್ಲಿ ಸ್ಥಾಪಿಸಿರುವ ಬಯೋಗ್ಯಾಸ್ ಘಟಕದಲ್ಲಿ ಹಸಿ ಕಸ ಬಳಸಿಕೊಂಡು ಸಿಎನ್ಜಿ ಉತ್ಪಾದಿಸುವ ಘಟಕವನ್ನು ಸಂಸದರು ಪರಿಶೀಲಿಸಿದರು.
ಎಂಆರ್ಎಫ್ ಘಟಕ:
ಒಣ ಕಸ ಪಡೆದು ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎಂಆರ್ಎಫ್ ಘಟಕವನ್ನು ₹ 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು ಯಂತ್ರ ಅಳವಡಿಕೆ ನಡೆಯಬೇಕಿದೆ ಎಂದು ಅಧಿಕಾರಿಗಳು ಸಂಸದರಿಗೆ ತಿಳಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ತ್ಯಾಜ್ಯ ಪ್ರಮಾಣ, ಪೌರ ಕಾರ್ಮಿಕರ ಸಂಖ್ಯೆ, ಸಂಗ್ರಹ ವ್ಯವಸ್ಥೆ ಮತ್ತಿತರ ಸಮಗ್ರ ಮಾಹಿತಿಯನ್ನು ಸಂಸದರು ಪಡೆದುಕೊಂಡರು. ಡಂಪಿಂಗ್ ಯಾರ್ಡ್ನಲ್ಲಿ ನಗರಸಭೆಯ 15ನೇ ಹಣಕಾಸು ನಿಧಿಯ ₹ 26 ಲಕ್ಷ ವೆಚ್ಚದಲ್ಲಿ ಖರೀದಿಸಿದ ಜೆಸಿಬಿಯನ್ನು ಸಂಸದರು ಬಿಡುಗಡೆ ಮಾಡಿದರು.
ಪುತ್ತೂರು ನಗರಸಭೆ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಶೂನ್ಯ ತ್ಯಾಜ್ಯ ಯೋಜನೆ ಜಾರಿಗೊಳಿಸುತ್ತಿದೆ. ಇದು ಭವಿಷ್ಯದ ಪುತ್ತೂರಿಗೆ ದೊಡ್ಡ ಕೊಡುಗೆಯಾಗಲಿದೆ. ಹಸಿ ಕಸವೆಲ್ಲವೂ ಇಲ್ಲಿ ಬಯೋಗ್ಯಾಸ್ ಆಗುತ್ತಿದೆ. ಸ್ವಚ್ಛ ಭಾರತ್ ಮಿಶನ್ ಯೋಜನೆಯಲ್ಲಿ ನೀಡಿದ ಅನುದಾನದಲ್ಲಿ ಪಾರಂಪರಿಕ ಹಳೆಯ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಪುತ್ತೂರಿನ ಈ ವೈಜ್ಞಾನಿಕ ಯೋಜನೆ ಎಲ್ಲಾ ನಗರಾಡಳಿತ ಸಂಸ್ಥೆಗಳಿಗೂ ಮಾದರಿ ಎಂದು ಸಂಸದರು ಹೇಳಿದರು.
ಮುಖಂಡ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್, ಕೃಷ್ಣ ಮುಳಿಯ ಗ್ರೀನ್ ಎಲ್ಎಲ್ಪಿಯ ಕೃಷ್ಣ ನಾರಾಯಣ ಮುಳಿಯ, ರೀಟ್ಯಾಪ್ ಸೊಲ್ಯೂಷನ್ ಸಂಸ್ಥೆಯ ಪ್ರಶಾಂತ್ ದೇವಾಡಿಗ, ಭವ್ಯಾ ದಾಮೋದರ್, ಯೋಜನಾ ನಿರ್ದೇಶಕ ರಾಜೇಶ್ ಬೆಜ್ಜಂಗಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.