ಹರಪನಹಳ್ಳಿ: ವರುಣನ ಕೃಪೆಗಾಗಿ ಶುಕ್ರವಾರ ಪಟ್ಟಣದ ದೊಡ್ಡಗರಡಿಕೇರಿ, ಹುಲ್ಲುಗರಡಿಕೇರಿ, ತೆಕ್ಕದಗರಡಿಕೇರಿ, ಚಿಕ್ಕೇರಿ, ಡಾ.ಬಿ.ಆರ್. ಅಂಬೇಡ್ಕರ್ ನಗರ, ಆಂಜನೇಯ ಬಡಾವಣೆ ಹಾಗೂ ಗುಂಡಿನಕೇರಿಯ ಸಾವಿರಾರು ಕುಟುಂಬಗಳ ಪ್ರತಿಯೊಂದು ಮನೆಯಲ್ಲಿ ಮಳೆರಾಯ ಸುರಿದು ಬದುಕು ಹಸನಾಗಲಿ ಎಂದು ಅಜ್ಜಮ್ಮನ ಪೂಜೆ ನೆರವೇರಿಸಿದರು.
ಹೊಂಬಳಗಟ್ಟೆ ಸಮೀಪದಲ್ಲಿರುವ ಗಡಿಯವರೆಗೂ ದೇವಿಯನ್ನು ಕರೆದೊಯ್ಯುತ್ತೇವೆ. ಆಕೆ ಎಲ್ಲಿಯವರೆಗೂ (ಕೇಲು ಹೊತ್ತವರು) ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಹೋಗುತ್ತವೆ. ಸಾಮಾನ್ಯವಾಗಿ ಗಡಿಯ ಸರಹದ್ದಿನಲ್ಲಿ ದೇವಿ ನಿಲ್ಲುತ್ತಾಳೆ. ಇದು ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಕಾಕತಾಳೀಯ ಎಂದರೆ, ಹೀಗೆ ಮಾಡಿದ ವಾರದ ಒಪ್ಪತ್ತಿನಲ್ಲಿ ಹಸನಾದ ಮಳೆ ಸುರಿಯುತ್ತದೆ ಎನ್ನುತ್ತಾರೆ ಆಲೂರು ಚೌಡಪ್ಪ.
ಈ ಸಂದರ್ಭದಲ್ಲಿ ಪಟ್ನಾಮದ ದುರುಗಪ್ಪ, ದ್ಯಾಮಜ್ಜ, ಹನುಮಂತಪ್ಪ, ತಲುವಾಗಲು ಕೆಂಚಪ್ಪ, ಮಂಡಕ್ಕಿ ಸುರೇಶ್, ಪೆನ್ನಪ್ಪ ಹಾಜರಿದ್ದರು.
ಮಸೀದಿಯಲ್ಲಿ ಪ್ರಾರ್ಥನೆ
ಹೊನ್ನಾಳಿ: ಮಳೆಗಾಗಿ ಮುಸ್ಲಿಮರು ಶುಕ್ರವಾರ ಇಲ್ಲಿ ದೇವರಿಗೆ ಪ್ರಾರ್ಥಿಸಿದರು. ಪಟ್ಟಣದ ದೇವನಾಯ್ಕನಹಳ್ಳಿ (ಟಿ.ಬಿ. ಸರ್ಕಲ್)ಯ ನೂರಾನಿ ಮಸೀದಿಯಲ್ಲಿ ಶುಕ್ರವಾರ ನೂರಾರು ಮುಸ್ಲಿಮರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದ್ದರೂ ಮಳೆ ಬಾರದಿರುವುದರಿಂದ ಜನರು ಕಂಗಾಲಾಗಿದ್ದಾರೆ. ಮಳೆ ಸುರಿಸಿ ಇಳೆಗೆ ತಂಪೆರೆಯುವಂತೆ ಬೇಡಿಕೊಂಡರು.
ಮಸೀದಿಯ ಮೌಲ್ವಿ ಮಸ್ರೂಫ್ ಅಹಮ್ಮದ್ ರಜ್ವಿ ಅವರ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ಮುಖಂಡರಾದ ಜಬ್ಬಾರ್ ಸಾಬ್, ಬಾಬುಸಾಬ್, ಖಿಜರ್ ಅಹಮ್ಮದ್ ಖಾನ್, ಷಕೀಲ್ ಅಹಮ್ಮದ್, ಹಾಜಿ ಅಬ್ದುಲ್ ವಾಜಿದ್, ಅಲ್ತಾಫ್ ಅಹಮ್ಮದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.