ADVERTISEMENT

ಅಧಿಕಾರಿಗಳು ಸಬೂಬು ಹೇಳಿದರೆ ಶಿಸ್ತುಕ್ರಮ

ಮಿಂಚಿನ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಮೇಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 8:20 IST
Last Updated 5 ಏಪ್ರಿಲ್ 2018, 8:20 IST
ದಾವಣಗೆರೆಯ ಬಾಬೂ ಜಗಜೀವನರಾಂ ಭವನದಲ್ಲಿ ಮಂಗಳವಾರ ಬಿಎಲ್‌ಒಗಳ ಪುನಶ್ಚೇತನ ಕಾರ್ಯಾಗಾರ ಹಾಗೂ ಮಿಂಚಿನ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿದರು.
ದಾವಣಗೆರೆಯ ಬಾಬೂ ಜಗಜೀವನರಾಂ ಭವನದಲ್ಲಿ ಮಂಗಳವಾರ ಬಿಎಲ್‌ಒಗಳ ಪುನಶ್ಚೇತನ ಕಾರ್ಯಾಗಾರ ಹಾಗೂ ಮಿಂಚಿನ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿದರು.   

ದಾವಣಗೆರೆ: ಮತದಾರರ ‍ಪಟ್ಟಿಯಲ್ಲಿ ಹೆಸರು ಸೇರಿಸಲು ಅಥವಾ ತಿದ್ದುಪಡಿ ಮಾಡಲು ಸಬೂಬು ಹೇಳಿ ಕಾಲಹರಣ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅಧಿಕಾರಿಗಳಿಗೆ ಎಚ್ಚರಿಕ ನೀಡಿದರು.ಜಿಲ್ಲಾಡಳಿತ, ಚುನಾವಣಾ ಆಯೋಗದಿಂದ ಬಾಬೂ ಜಗಜೀವನರಾಂ ಭವನದಲ್ಲಿ ಬುಧವಾರ ಬಿಎಲ್‌ಒಗಳ ಪುನಶ್ಚೇತನ ಕಾರ್ಯಾಗಾರ ಹಾಗೂ ಮಿಂಚಿನ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳು ಒತ್ತಡ, ಆಮಿಷಕ್ಕೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಗಮನಕ್ಕೆ ತರಬೇಕು. ಚುನಾವಣಾ ಆಯೋಗದ ನಿಮಯಗಳಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ಬದಲಾವಣೆ ತಿದ್ದುಪಡಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಾರದಂತೆ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.ಮಿಂಚಿನ ಮತದಾರರ ನೋಂದಣಿ ಅಭಿಯಾನದಲ್ಲಿ ಮತದಾರರಿಗೆ ವಿವಿಧ ನಮೂನೆಗಳನ್ನು ಅರ್ಥವಾಗುವಂತೆ ವಿವರಿಸಿ ಸರಿಯಾಗಿ ಅರ್ಜಿ ಭರ್ತಿ ಮಾಡಿಸಬೇಕು. ಶೇ100ರಷ್ಟು ನೋಂದಣಿಯಾಗುವಂತೆ ನೋಡಿ ಕೊಳ್ಳಬೇಕು. ಕೆಲವೆಡೆ ಬೂತ್ ಮಟ್ಟದ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಅಂತರ್ಜಾಲದಲ್ಲಿ ಎಲ್ಲ ಮಾಹಿತಿಗಳು ಮುಕ್ತವಾಗಿ ಲಭ್ಯವಾಗುತ್ತವೆ. ಮತದಾರರಿಗೆ ಕಾರಣಗಳನ್ನು ಹೇಳದೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಈಗಾಗಲೇ ಎಪಿಕ್ ಕಾರ್ಡ್ ವಿತರಿಸಲಾಗಿದೆ. ತಲುಪದವರು ತಕ್ಷಣ ಮಾಹಿತಿ ನೀಡಬೇಕು. ಏ.5ರಿಂದ ಮಹಾನಗರ ಪಾಲಿಕೆ ಬಳಿ ಎರಡು ಕೌಂಟರ್ ತೆರೆಯಲಾಗುತ್ತದೆ. ಅಗತ್ಯ ಮಾಹಿತಿ ನೀಡಿ ಎಪಿಕ್‌ ಕಾರ್ಡ್‌ ಪಡೆಯಬಹುದು ಎಂದರು. ಕೆಲವೆಡೆ ವಯಸ್ಸಿನ ದೃಢೀಕರಣದ ಬಗ್ಗೆ ಗೊಂದಲಗಳಿವೆ. ಕೆಲವರು 30ರಿಂದ 35ವರ್ಷ ದಾಟಿದವರಿದ್ದಾರೆ. ಅವರಿಗೆ ಎಪಿಕ್ ಕಾರ್ಡ್‌ ನೀಡಲು ಹೋದರೆ ಇಲ್ಲಿಯವರಿಗೆ ಏಕೆ ನೋಂದಾಯಿಸಿಲ್ಲ ಎಂದು ಆಯೋಗ ಪ್ರಶ್ನಿಸುತ್ತದೆ. ಹಾಗಾಗಿ, ವಯಸ್ಸಿನ ಬಗ್ಗೆ ಬಿಎಲ್ಒಗಳೇ ದೃಢೀಕರಿಸಿ ಪಟ್ಟಿಯಲ್ಲಿ ನೋಂದಾಯಿಸಬಹುದು ಎಂದರು.

ನಮೂನೆ 6 ಹಾಗೂ 8ಕ್ಕೆ ಸಂಬಂಧಿಸಿದಂತೆ ತಿರಸ್ಕೃತವಾಗಿರುವ ಅರ್ಜಿಗಳಿಗೆ ಕಾರಣ ನೀಡಿಲ್ಲ ಎಂದು ಬಿ.ಎಲ್.ಒ ಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಕಾರಣ ನೀಡದೆ ಅರ್ಜಿ ತಿರಸ್ಕರಿಸುವಂತಿಲ್ಲ. ತಿರಸ್ಕರಿಸಿದರೆ ಕಾರಣ ನೀಡಲೇಬೇಕು ಎಂದರು.ಈಗಾಗಲೇ ಬೂತ್ ಮಟ್ಟಗಳಲ್ಲಿ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ನಡೆಯುತ್ತಿದ್ದು, ಬಿ.ಎಲ್.ಓಗಳು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಬಿ.ಎಲ್.ಒಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.