ADVERTISEMENT

ಅನ್ಯ ಜಾತಿಗಳ ವಿಲೀನಕ್ಕೆ ಆಕ್ಷೇಪವಿಲ್ಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 6:13 IST
Last Updated 6 ಅಕ್ಟೋಬರ್ 2017, 6:13 IST

ಹರಪನಹಳ್ಳಿ: ಪರಿಶಿಷ್ಟ ಪಂಗಡಕ್ಕೆ ಅನ್ಯ ಜ್ಯಾತಿಗಳನ್ನು ವಿಲೀನಗೊಳಿಸಲು ಆಕ್ಷೇಪವಿಲ್ಲ. ಆದರೆ, ಸರ್ಕಾರ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಟಿ.ಪರಮೇಶ್ವರಪ್ಪ ಆಗ್ರಹಿಸಿದರು. ತಾಲ್ಲೂಕು ಆಡಳಿತ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಮೀಸಲಾತಿಯನ್ನು ಹೆಚ್ಚಿಸದಿದ್ದರೆ ಸಮುದಾಯದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಸರ್ಕಾರ ಗಮನಹರಿಸಬೇಕು. ನಾಯಕ ಜನಾಂಗ ತ್ಯಾಗ, ಬಲಿದಾನ, ವಿಶ್ವಾಸವನ್ನು ಆದರ್ಶ ಎಂದು ಭಾವಿಸಿ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ. ವಿಜಯನಗರ ಸಾಮ್ರಾಜ್ಯ ಪತನದ ನಂತರ ನಾಯಕ ಜನಾಂಗದ ಪಾಳೇಗಾರರು ಅನೇಕ ಕೆರೆ, ದೇವಸ್ಥಾನಗಳನ್ನು ನಿರ್ಮಿಸಿ ಜನಮನ್ನಣೆ ಗಳಿಸಿದ್ದರು. ಸರ್ಕಾರ ಅವುಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ವಿಶ್ವಕ್ಕೆ ಮಾದರಿಯಾಗಿದೆ. ರಾಮಾಯಣ ಗ್ರಂಥದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಹೋದರತೆ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ ಎಂದರು.

ADVERTISEMENT

ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಕೊಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಪಡೆಯಬೇಕು. ಸಮಾಜ ಮುನ್ನಲೆಗೆ ಬರಬೇಕು ಎಂದು ಕರೆ ನೀಡಿದರು.

ನಾಯಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪರಶುರಾಮಪ್ಪ, ಸುವರ್ಣ ಆರುಂಡಿ, ಡಿ.ಸಿದ್ದಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಸಮಾಜದ ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಪರಶುರಾಮಪ್ಪ ಮಾತನಾಡಿದರು.

ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಕೆ.ಗುರುಬಸವರಾಜ್‌, ಐ.ಬಸವರಾಜ್‌, ಎಸ್‌.ಬಸವರಾಜ್‌, ಅಂಜನೇಯ, ಬಸಪ್ಪ, ಶಿರಹಟ್ಟಿ ದಂಡ್ಯೆಪ್ಪ, ಒ.ರಾಮಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಆನಂದ ಡೊಳ್ಳಿನ ಸ್ವಾಗತಿಸಿದರು. ಬಸವರಾಜ್‌ ನಿರೂಪಿಸಿದರು. ಪೂಜಾರ್ ಮಂಜುನಾಥ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.