ಉಚ್ಚಂಗಿದುರ್ಗ: ಸಮೀಪದ ಚಿಕ್ಕಮೇಗಳಗೆರೆ ಕೆರೆ ಸೇತುವೆ ಒಡೆದು ಪೋತಲಕಟ್ಟೆ– ಹಿರೆಮೇಗಳಗೆರೆ ಸಂಪರ್ಕದ ಸೇತುವೆ ಅಪಾಯದ ಅಂಚಿನಲ್ಲಿದೆ. ಶೀಘ್ರವೇ ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ರಸ್ತೆಯನ್ನು ಇತ್ತೀಚೆಗೆ ಹಿರೆಮೇಗಳಗೆರೆ ಗ್ರಾಮ ಪಂಚಾಯ್ತಿ ವತಿಯಿಂದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ನಿರ್ಮಿಸಲಾಗಿತ್ತು. ಅತಿವೃಷ್ಟಿಯಿಂದಾಗಿ ಸೇತುವೆ ಕಳಚುವ ಭೀತಿ ಎದುರಾಗಿದೆ. ಪೋತಲಕಟ್ಟೆ, ನಾಗತಿಕಟ್ಟೆ, ಗೌಳೆರಹಟ್ಟಿ, ಫಣಿಯಾಪುರದ ನೂರಾರು ಗ್ರಾಮಸ್ಥರು ರೈತರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ಎದುರಾಗಿದೆ.
ನಿರಂತರ ಬರಗಾಲದಿಂದಾಗಿ ಕೆರೆಯಲ್ಲಿ ನೀರು ಕಾಣದ ರೈತರು ಈ ವರ್ಷ ಕೆರೆಯಲ್ಲಿ ನೀರು ಕಂಡು ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದಾರೆ. ಕೆರೆಯಲ್ಲಿ ನಿರಂತರ ಮರಳು ಸಾಗಾಣಿಕೆ ನಡೆದಿರುವುದರಿಂದ ದೊಡ್ಡ ಗುಂಡಿಗಳ ಆಗರವೆ ಇದೆ.
ರೈತರು ಜಾನುವಾರುಗಾಹಿಗಳು ಎಚ್ಚರಿಕೆಯಿಂದ ಇರಬೇಕು. ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಕೂಡಲೇ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ನಾಗತಿಕಟ್ಟೆ ದೇವೇಂದ್ರನಾಯ್ಕ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.