ADVERTISEMENT

ಅರ್ಥ ವ್ಯವಸ್ಥೆ ಹಳಿ ತಪ್ಪದಿರಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:10 IST
Last Updated 17 ಸೆಪ್ಟೆಂಬರ್ 2011, 6:10 IST

ಹೊನ್ನಾಳಿ: ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕಷ್ಟೇ ಬಳಸಬೇಕು. ಸಕಾಲದಲ್ಲಿ ಸಾಲ ಪರುಪಾವತಿ ಮಾಡಿ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ  ಸ್ವಾಮೀಜಿ ಹೇಳಿದರು.

ಪಟ್ಟಣದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪಕ್ಕ ನಿರ್ಮಿಸಲಾಗಿರುವ `ಶಿವ ವಾಣಿಜ್ಯ ಸಂಕೀರ್ಣ~ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿವ ಬ್ಯಾಂಕ್ ತನ್ನ ಪ್ರಾದೇಶಿಕ ಚೌಕಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್‌ನ ನಿರ್ದೇಶಕರು ಜನರಿಗೆ ಸಾಲ ನೀಡಿಸಲು ಶಿಫಾರಸು ಮಾಡಿದ ಹಾಗೆ ಮರುಪಾವತಿಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾದ ಕಾರಣ ಅರ್ಥ ವ್ಯವಸ್ಥೆ ತಲ್ಲಣಗೊಂಡಿತು. ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಹಿನ್ನಡೆ ಅನುಭವಿಸಿತು. ಜನತೆ ಕೂಡಾ ಸಂಕಷ್ಟಕ್ಕೆ ಸಿಲುಕುವಂತೆ ಆಯಿತು. ಅಂತಹ ಪರಿಸ್ಥಿತಿ ಭಾರತದಲ್ಲಿ ಇಲ್ಲ. ಜನರು ಸಮರ್ಪಕವಾಗಿ ವ್ಯವಹಾರ ಮಾಡಿಕೊಂಡು ದೇಶದ ಅರ್ಥ ವ್ಯವಸ್ಥೆಗೆ ತಮ್ಮದೇ ಆದ ಕಾಣಿಕೆ ನೀಡಬೇಕು ಎಂದರು.

ಸೊಸೈಟಿ ಅಧ್ಯಕ್ಷ ಟಿ.ಎಸ್. ಸೋಮಶೇಖರ್, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್. ಗುರುಮೂರ್ತಿ, ಮಲ್ಲೇಶ್, ವೀರಪ್ಪಗೌಡ, ಮನೋಹರ್, ಈಶ್ವರಪ್ಪ, ಶಂಕರಮೂರ್ತಿ, ಗಂಜೀನಹಳ್ಳಿ ರುದ್ರೇಶ್, ಹಾಲೇಶಪ್ಪ, ಯಜ್ಞೇಶಪ್ಪ ಇತರರು  ಉಪಸ್ಥಿತರಿದ್ದರು.

ಹ್ಯಾಟ್ರಿಕ್ ಸಾಧನೆ: ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಗೋವಿನಕೋವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ರೇವತಿ ಮತ್ತು ರೇಣುಕಾ ಎಂಬ ವಿದ್ಯಾರ್ಥಿನಿಯರು ಓಟದಲ್ಲಿ ವಿಶೇಷ ಸಾಧನೆಗೈದಿದ್ದಾರೆ. 

ರೇವತಿ 1,500, 800 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೇಣುಕಾ 300 ಮೀ. ಓಟದಲ್ಲಿ ಪ್ರಥಮ, 1,500 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ರೇವತಿ ಮತ್ತು ರೇಣುಕಾ ಸತತವಾಗಿ 3ನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. 

ಉಳಿದಂತೆ ಗೌರಮ್ಮ 3000 ಮೀ. ಓಟದಲ್ಲಿ ದ್ವಿತೀಯ, ರಂಗನಾಥ್ 1500 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಬೆಳಗಿಸಿದ್ದಾರೆ. ಆ ಮೂಲಕ ಇವರೆಲ್ಲಾ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲೀಬಾಲ್‌ನಲ್ಲಿ ಗಣೇಶ್, ಬೀರೇಶ್, ಸುರೇಶ್, ಹರೀಶ್ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.