ಜಗಳೂರು: ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ನಿರ್ಮಾಣದ ಹಂತದಲ್ಲಿರುವ ಅಶೋಕಸ್ತಂಭ ಕಾಮಗಾರಿಯಿಂದಾಗಿ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ವೃತ್ತ ಸದಾ ವಾಹನ ಹಾಗೂ ಪಾದಚಾರಿಗಳ ದಟ್ಟಣೆಯಿಂದ ಕೂಡಿದ್ದು, ಅತ್ಯಂತ ಕಿರಿದಾಗಿರುತ್ತದೆ. ಇಕ್ಕಟ್ಟಾದ ಈ ಸ್ಥಳದಲ್ಲಿ ಪಟ್ಟಣ ಪಂಚಾಯ್ತಿ, ್ಙ 10 ಲಕ್ಷ ವೆಚ್ಚದಲ್ಲಿ ಬೃಹತ್ ಅಶೋಕಸ್ತಂಭ ನಿರ್ಮಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದಾವಣಗೆರೆ, ಚಳ್ಳಕೆರೆ, ಚಿತ್ರದುರ್ಗ ಹಾಗೂ ಕೂಡ್ಲಿಗಿ ಮುಂತಾದ ಸ್ಥಳಗಳಿಗೆ ತೆರಳುವ ಎಲ್ಲಾ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈ ಹಿಂದೆ ಇಲ್ಲಿ ಚಿಕ್ಕ ವೃತ್ತ ನಿರ್ಮಿಸಲಾಗಿತ್ತು. ಆದರೆ, ಹಳೆಯ ವೃತ್ತಕ್ಕಿಂತ ಪ್ರಸ್ತುತ ಹೆಚ್ಚು ವಿಸ್ತೀರ್ಣದಲ್ಲಿ ವೃತ್ತ ನಿರ್ಮಿಸಲು ಹೊರಟಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ವೃತ್ತದ ಪೂರ್ವದ ಚಳ್ಳಕೆರೆ ಹಾಗೂ ಚಿತ್ರದುರ್ಗ ರಸ್ತೆ ಎತ್ತರದ ಪ್ರದೇಶದಲ್ಲಿದ್ದು, ಇಲ್ಲಿಂದ ರಭಸವಾಗಿ ಬರುವ ವಾಹನಗಳು ವೃತ್ತದಲ್ಲಿ ಎಡ ಅಥವಾ ಬಲಭಾಗಕ್ಕೆ ಸಾಗಲು ತೊಂದರೆಯಾಗುತ್ತಿದೆ. ಅಲ್ಲದೇ, ಪಟ್ಟಣದ ಬಹುತೇಕ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಈ ವೃತ್ತವನ್ನು ಬಳಸಿಕೊಂಡು ಸಾಗಬೇಕಾಗುತ್ತದೆ. ಹಳೇ ಬಸ್ನಿಲ್ದಾಣವೂ ಆಗಿರುವ ಇಲ್ಲಿ ಎಲ್ಲಾ ಬಸ್ಗಳು ನಿಲುಗಡೆ ಮಾಡುವುದರಿಂದ ಸದಾ ಇದು ದಟ್ಟಣೆಯ ಪ್ರದೇಶವಾಗಿದೆ.
`ಮಹಾತ್ಮ ಗಾಂಧಿ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಲಾ ್ಙ 10 ಲಕ್ಷ ವೆಚ್ಚದಲ್ಲಿ ಸಾಂಚಿ ಹಾಗೂ ಸಾರನಾಥದ ಮಾದರಿಯಲ್ಲಿ ಅಶೋಕಸ್ತಂಭವನ್ನು ಸ್ಥಾಪಿಸಲಾಗುವುದು. ಗ್ರಾನೈಟ್ ಶಿಲೆಯಲ್ಲಿ ಸ್ತಂಭಗಳು ನಾಲ್ಕು ಸಿಂಹಗಳು ಹಾಗೂ ಅಶೋಕಚಕ್ರದ ಕೆತ್ತನೆಯನ್ನು ಒಳಗೊಂಡಿರುತ್ತವೆ. ತಮಿಳುನಾಡಿನಲ್ಲಿ ಸ್ತಂಭಗಳು ತಯಾರಾಗಲಿವೆ.
ವೃತ್ತದ ಸ್ಥಳ ಇಕ್ಕಾಟದಲ್ಲಿ ಸುತ್ತಲಿನ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ.ಪಂ. ಅಧ್ಯಕ್ಷ ಜೆ.ವಿ. ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮತ್ತು ಅಪಘಾತಗಳಿಗೆ ಅವಕಾಶವಿಲ್ಲದಂತೆ ಪಟ್ಟಣ ಪಂಚಾಯ್ತಿ ಅಗತ್ಯಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.