ADVERTISEMENT

ಇಂದು ನಗರಕ್ಕೆ 250 ನದಿಗಳ ಪವಿತ್ರಜಲ!

ಗಾಯತ್ರಿ ಅಶ್ವಮೇಧ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:27 IST
Last Updated 6 ಸೆಪ್ಟೆಂಬರ್ 2013, 5:27 IST

ದಾವಣಗೆರೆ: ಲೋಕ ಕಲ್ಯಾಣಕ್ಕಾಗಿ ಉತ್ತರಾಖಂಡದ ಹರಿದ್ವಾರದ ಶಾಂತಿ ಕುಂಜದ ವಿಶ್ವ ಗಾಯತ್ರಿ ಪರಿವಾರ ಹಮ್ಮಿಕೊಂಡಿರುವ ಗಾಯತ್ರಿ ಅಶ್ವಮೇಧ ಮಹಾಯಜ್ಞದ ಕಲಶ ರಥಯಾತ್ರೆ ಸೆ.6ರಂದು ಬೆಳಿಗ್ಗೆ 11ಕ್ಕೆ ನಗರ ಪ್ರವೇಶಿಸಲಿದೆ.

ವಿವಿಧ 250 ನದಿಗಳ ಪವಿತ್ರ ಜಲ ಹೊಂದಿರುವ ಈ ಕಲಶ ರಥಯಾತ್ರೆಯನ್ನು ನಗರದಲ್ಲಿ ಭಕ್ತಿಭಾವದಿಂದ ಸ್ವಾಗತಿಸಲಾಗುವುದು ಎಂದು ಇಲ್ಲಿನ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾತ್ರೆಯನ್ನು ಅರುಣ ಚಿತ್ರಮಂದಿರ ಬಳಿ ಮಂಗಳವಾದ್ಯ, ಸಮಾಳ, ನಂದಿಕೋಲು ಮೊದಲಾದ ಕಲಾ ತಂಡಗಳೊಂದಿಗೆ ಬರಮಾಡಿಕೊಳ್ಳ ಲಾಗುವುದು. ಯಾತ್ರೆಯು ಪಿ.ಬಿ.ರಸ್ತೆ, ಗಾಂಧಿ ವೃತ್ತದ ಮೂಲಕ ಆರ್.ಎಚ್.ಗೀತಾ ಮಂದಿರಕ್ಕೆ ತಲುಪಲಿದೆ. ಅಲ್ಲಿ ಮಧ್ಯಾಹ್ನ 12ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಯಾತ್ರಾ ಸಮಿತಿ ಪ್ರವರ್ತಕ ಧರ್ಮೇಂದ್ರ ಶರ್ಮಾ ಉದ್ಘಾಟಿಸುವರು. ಇಲ್ಲಿನ ಗಾಯತ್ರಿ ಪರಿವಾರದ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಶಂಕರಣನಾರಾಯಣ ಶಾಸ್ತ್ರಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಸಂಜೆ 6ಕ್ಕೆ ಕಲಶ ಯಾತ್ರಾ ಭಕ್ತರಿಂದ ಸಾಮೂಹಿಕ ಭಜನೆ, ಗಾಯತ್ರಿ ಉಪಾಸನೆ ಪೂಜೆ ಹಾಗೂ ಧರ್ಮೇಂದ್ರ ಶರ್ಮಾ ಅವರಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವಿದೆ ಎಂದರು.

ಗಾಯತ್ರಿ ಮಂತ್ರ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಲ್ಲ. ಮಹಿಳೆಯರೂ ಸಹ ಮಂತ್ರ ಪಠಣ ಮಾಡಬಹುದು.
ಜುಲೈ 25ರಿಂದ ಹೊರಟ ಈ ಯಾತ್ರೆ, ಜ. 20ರಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಮುಕ್ತಾಯಗೊಳ್ಳಲಿದೆ. ಅಂದು 51,000 ದೀಪಗಳಿಂದ ಮಹಾಯಜ್ಞ, ಮಹಾಪೂರ್ಣಾಹುತಿ ನಡೆಯಲಿದೆ ಎಂದರು.

ಅಧ್ಯಕ್ಷ ಕೆ.ಎಚ್.ಮಂಜುನಾಥ್, ಖಜಾಂಚಿ ಪುರುಷೋತ್ತಮ ಪಟೇಲ್, ಭಾವನ್ ನಾರಾಯಣ್, ಹುಕ್ಕುಂಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಇಂದು ಸಭೆ
ನ್ಯಾಮತಿ:
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಸತಿ-ಶೌಚಾಲಯ ಸೇರಿದಂತೆ ವಿವಿಧ ಯೋಜನೆಗಳಿಗೆ ವರ್ಷದ ಹಿಂದೆಯೇ ಫಲಾನುಭವಿಗಳು  ಆಯ್ಕೆಯಾಗಿದ್ದು, ಇದುವರೆವಿಗೂ ಸಹ ಅನುದಾನ ಪಡೆಯದೆ  ಗ್ರಾಮಾಡಳಿತದಿಂದ ಸ್ಷಪ್ಟ ಮಾಹಿತಿಯೂ ಸಹ ಸಿಗದೆ ಫಲಾನುಭವಿಗಳು ಕಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತದೊಂದಿಗೆ ಚರ್ಚಿಸಲು ಗ್ರಾಮ ಪಂಚಾಯ್ತಿ ಸದಸ್ಯ ಪಿ. ಚಂದ್ರಶೇಖರ್ ನೇತೃತ್ವದಲ್ಲಿ    ಸೆ. 6ರಂದು ಬೆಳಿಗ್ಗೆ 11ಕ್ಕೆ  ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಭೆ ಕರೆದಿದ್ದು, ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.