ADVERTISEMENT

ಎಸ್ಸೆಸ್ಸೆಂ–ಸಿದ್ರಾಮಣ್ಣ ಮಧ್ಯೆ ಬಿಸಿಬಿಸಿ ಚರ್ಚೆ

ಕಾಲೇಜು ವಿದ್ಯಾರ್ಥಿಗಳಿಗೆ ಆರ್ಎಸ್‌ಎಸ್‌ ವಸ್ತ್ರ ವಿತರಣೆ ವಿಚಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 4:00 IST
Last Updated 12 ಸೆಪ್ಟೆಂಬರ್ 2013, 4:00 IST

ದಾವಣಗೆರೆ: ವಿವೇಕಾನಂದರ 150 ನೇ ವರ್ಷಾಚರಣೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆರ್‌ಎಸ್‌ಎಸ್‌ ಸಂಸ್ಥೆ ಟೋಪಿ, ಟೊಣ್ಣ ವಸ್ತ್ರ ವಿತರಣೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ತನಿಖೆ ಮಾಡಿ ಅಂತಹ ಕಾಲೇಜು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಎಸ್‌.ಎಸ್. ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕರಿಗೆ ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸೂಚಿಸಿದರು.

ಇದರಿಂದ ವಿಧಾನ ಪರಿಷತ್‌ ಸದಸ್ಯ ಸಿದ್ರಾಮಣ್ಣ ಆಕ್ಷೇಪಿಸಿ, ‘ಎಲ್ಲರಿಗೂ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ, ವಸ್ತ್ರ ಪಡೆಯುವ ಮತ್ತು ನೀಡುವ ಸಾಂವಿಧಾನಿಕ ಹಕ್ಕಿದೆ. ಅದನ್ನು ಪ್ರಶ್ನಿಸಲು ಮತ್ತು ಮೊಟಕುಗೊಳಿಸಲು ಯಾರಿಗೂ ಅಧಿಕಾರವಿಲ್ಲ. ಇಲ್ಲಿ ತನಿಖೆ ಮಾಡುವುದಕ್ಕೆ ಏನೂ ಇಲ್ಲ. ತನಿಖೆ ಮಾಡುವುದೆಂದರೆ ಏನು ಎಂಬುದನ್ನು ಮೊದಲು ತಿಳಿಯಿರಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಲ್ಲಿಕಾರ್ಜುನ್‌, ‘ಆರ್‌ಎಸ್‌ಎಸ್‌  ವಿದ್ಯಾರ್ಥಿಗಳಿಗೆ  ವಸ್ತ್ರ ವಿತರಿಸಿದೆ ಎಂಬುದು ಖಚಿತವಾಗಿ ಕಂಡುಬಂದಿಲ್ಲ. ಆದರೆ, ಆರ್ಎಸ್‌ಎಸ್‌ ವಸ್ತ್ರ ತೊಟ್ಟ ವಿದ್ಯಾರ್ಥಿಗಳು ರಾ್ಯಲಿಯಲ್ಲಿ ಭಾಗವಹಿಸಿದ್ದನ್ನು ನಾವೇ ಕಣ್ಣಾರೆ ಕಂಡುಬಂದಿದ್ದೇವೆ. ಅದಕ್ಕೆ ಅನುಮತಿ ನೀಡಿದವರು ಯಾರು? ಸರ್ಕಾರಿ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಿ ಆಚರಣೆ ಮಾಡುವ ಹಕ್ಕಿದೆ. ನನ್ನದು ಹಕ್ಕಿನ ಪ್ರಶ್ನೆಯಲ್ಲ; ಕಾಲೇಜು ವಿದ್ಯಾರ್ಥಿಗಳನ್ನು ಒಂದು ಖಾಸಗಿ ಸಂಘಸಂಸ್ಥೆಯ ವಸ್ತ್ರಸಂಹಿತೆಗೆ ಅಳವಡಿಸಿ ದಾರಿ ತಪ್ಪಿಸುವಂತಹ ಕಾರ್ಯವಾಗಬಾರದು. ಅಂತಹ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿದ ಕಾಲೇಜು ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು.

ಶಾಸಕ ಮಲ್ಲಿಕಾರ್ಜುನ್‌ ಅವರಿಗೆ ಸಾಥ್‌ ನೀಡಿದ ಹರಿಹರದ ಶಾಸಕ ಎಚ್.ಎಸ್. ಶಿವಶಂಕರ್, ‘ಇದು ಸೂಕ್ಷ್ಮ ವಿಚಾರ. ಕಾಲೇಜು ವಿದ್ಯಾರ್ಥಿಗಳನ್ನು ಆರ್‌ಎಸ್‌ಎಸ್‌ ಅಂತಹ ಸಂಸ್ಥೆ ಬಳಸಿಕೊಳ್ಳುವುದು ಸರಿಯಲ್ಲ. ಅದು ಸರ್ಕಾರಿ ಕಾರ್ಯಕ್ರಮವಾದರೆ ಎಲ್ಲರೂ ಭಾಗವಹಿಸಿ ಆಚರಣೆ ಮಾಡಲಿ. ಖಾಸಗಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.

ಒಂದು ರೀತಿಯಲ್ಲಿ ಈ ಚರ್ಚೆ ಪಕ್ಷ–ಪಕ್ಷಗಳ ಪರ ವಿರೋಧದ ಚರ್ಚೆಯಂತೆ ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.