ದಾವಣಗೆರೆ: ಖಾಸಗಿ ಶಾಲೆಗಳೇ ಪ್ರಭುತ್ವ ಸಾಧಿಸಿರುವ ಜಿಲ್ಲೆಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣದ ಮೂಲಕ ಗಮನ ಸೆಳೆಯುತ್ತಿದೆ. ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆದು ರ್ಯಾಂಕ್ ಗಳಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಶ್ಲಾಘಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಾಯಾಮ ಶಾಲೆ ಕಟ್ಟಡ ಹಾಗೂ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ದೊರೆಯಲು ಕಾಲೇಜಿಗೆ ಮೂಲಸೌಕರ್ಯ ಅಗತ್ಯ. ಒಳ್ಳೆ ಕಟ್ಟಡ, ವಾಚನಾಲಯ, ಉತ್ತಮ ಉಪನ್ಯಾಸಕರು ಇದ್ದರೆ ಅಂತಹ ಕಾಲೇಜು ಉನ್ನತ ಪ್ರಗತಿ ಕಾಣುತ್ತದೆ. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನೈತಿಕತೆ, ಚಾರಿತ್ರ್ಯದ ಬಗ್ಗೆಯೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಸರ್ಕಾರದ ಅನುದಾನದ ಜತೆಗೆ, ಜನಪ್ರತಿನಿಧಿಗಳು ಕಾಲೇಜಿಗೆ ಸಾಕಷ್ಟು ನೆರವು ನೀಡಿದ್ದಾರೆ. ಕಾಲೇಜಿನ ಅಭಿವೃದ್ಧಿಗೆ ಸರ್ಕಾರಕ್ಕೆ ್ಙ 3 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ್ಙ 1.5 ಕೋಟಿ ನೆರವು ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಭಾರತ ಸಾಂಸ್ಕೃತಿಕವಾಗಿ ಶ್ರೀಮಂತರಾಷ್ಟ್ರ. ವಿವೇಕಾನಂದರ ಆಶಯದಂತೆ ಇತಿಹಾಸದ ಬಗ್ಗೆ ಗೌರವ ಹೊಂದಿರುವ ವ್ಯಕ್ತಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಲ್ಲರು ಎಂದರು.
ನಿವೃತ್ತ ಪ್ರಾಂಶುಪಾಲ ಎಸ್.ಎಚ್. ಪಟೇಲ್ ಸಮಾರೋಪ ಮಾತುಗಳನ್ನು ಆಡಿದರು. ಪ್ರಾಂಶುಪಾಲ ಡಿ. ಬಸವರಾಜ್ ಪ್ರಾಸ್ತಾವಿಕ ಮಾತನಾಡಿದರು. ಮೇಯರ್ ಸುಧಾ ಜಯರುದ್ರೇಶ್, ಪಾಲಿಕೆ ಸದಸ್ಯೆ ಜ್ಯೋತಿ ಸಿದ್ದೇಶ್, ಕುಮಾರಿ, ಎಂ.ಎಸ್. ಕಿಣಿ, ಕೆ.ಎನ್. ಓಂಕಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
18ಕ್ಕೆ ನೇಮಕಾತಿ ರ್ಯಾಲಿ
ನಗರದ ಪಿ.ಜೆ. ಬಡಾವಣೆಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಏ. 18ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಚೆನ್ನೈನ ಫಸ್ಟ್ ಸೋರ್ಸ್ ಬಿಪಿಒ ಕಂಪೆನಿ `ವಾಯ್ಸ ಪ್ರೋಸೆಸ್~ (ಕಾಲ್ ಸೆಂಟರ್) ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿದೆ. ಪದವಿ, ಡಿಪ್ಲೊಮಾ ಅಥವಾ ಪಿಯು ಪಾಸಾಗಿರುವವರು ಪಾಲ್ಗೊಳ್ಳಬಹುದು. ಕನ್ನಡ ಮತ್ತು ಇಂಗ್ಲಿಷ್ ಮಾತನಾಡಲು ಬರಬೇಕು.
18ರಿಂದ 35 ವರ್ಷ ವಯೋಮಿತಿಯವರಾಗಿರಬೇಕು. ಮಾಸಿಕ ್ಙ 7ರಿಂದ ್ಙ 8 ಸಾವಿರ ವೇತನ ನೀಡಲಾಗುವುದು. ವಿವರಕ್ಕೆ ದೂರವಾಣಿ: 08192- 259446 ಅಥವಾ ಮೊಬೈಲ್: 96633 91401 ಸಂಪರ್ಕಿಸಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.