ದಾವಣಗೆರೆ: ಸಂಸತ್ತಿನಲ್ಲಿ ಬುಧವಾರ ಮಂಡಿಸಿದ 2012-13ನೇ ಸಾಲಿನ ರೈಲ್ವೆ ಬಜೆಟ್ ಮೂಲಕ ರಾಜ್ಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯ ಜತೆಗೆ ಈ ಬಾರಿಯ ಬಜೆಟ್ನಲ್ಲಿ ಹೇಳಿಕೊಳ್ಳುವಂತಹ ಲಾಭವಾಗಿಲ್ಲ.
14 ಹೊಸ ರೈಲು ಯೋಜನೆಗಳು, 7 ಎಕ್ಸ್ಪ್ರೆಸ್ ರೈಲುಗಳು, 3 ಪ್ಯಾಸೆಂಜರ್ ರೈಲು, ಬೆಂಗಳೂರಿನಲ್ಲಿ ರೈಲ್ವೆ ಸುರಕ್ಷಾ ಕೇಂದ್ರ ಸ್ಥಾಪನೆ, ಕೋಲಾರದಲ್ಲಿ ನೂತನ ಬೋಗಿಗಳ ಕಾರ್ಖಾನೆ ಸ್ಥಾಪನೆ, ಮೂರು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸುವ ವಿಚಾರ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಜಿಲ್ಲೆಗೆ ಸಂಬಂಧಿಸಿದಂತೆ ಕೊಟ್ಟೂರು-ಜಗಳೂರು-ಶಿವಮೊಗ್ಗ ಮಾರ್ಗಕ್ಕಾಗಿ ್ಙ 2 ಕೋಟಿ ಮೀಸಲಿಡಲಾಗಿದೆ. ಹರಿಹರ- ಹೊನ್ನಾಳಿ-ಶಿವಮೊಗ್ಗ ಮಾರ್ಗ ಹಾಗೂ ತುಮಕೂರು-ಚಿತ್ರದುರ್ಗ ಮಾರ್ಗಕ್ಕೆ ಹಣ ನೀಡಿರುವುದು ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ.
ಪ್ರಯಾಣ ದರ ಏರಿಕೆ, ಪ್ಲಾಟ್ಪಾರ್ಮ್ ದರ ಏರಿಸಿರುವುದು. ಹರಿಹರ-ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಸೇರಿದಂತೆ ಅಗತ್ಯ ರೈಲು ಸಂಚಾರ ಆರಂಭಿಸದೇ ಇರುವುದು ಬೇಸರದ ಸಂಗತಿ.
ರೈಲ್ವೆ ಬಜೆಟ್ ಕುರಿತಂತೆ ಜಿಲ್ಲೆಯ ಸಂಸತ್ ಸದಸ್ಯರು, ಮುಖಂಡರು ಹಾಗೂ ಜನಸಾಮಾನ್ಯರು ವಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಜನಪರ-ಜನಪ್ರಿಯವಲ್ಲದ ಬಜೆಟ್
ಸದಾ ಜನಸಾಮಾನ್ಯರ ಪರ ಎಂದು ಹೇಳಿಕೊಳ್ಳುವ ಕೇಂದ್ರದ ಯುಪಿಎ ಸರ್ಕಾರ ಮಂಡಿಸಿರುವ ರೈಲ್ವೆ ಬಜೆಟ್ ನಿರಾಶಾದಾಯಕವಾಗಿದೆ. ರಾಜ್ಯಕ್ಕೆ ನೀಡಿರುವ 7 ಎಕ್ಸ್ಪ್ರೆಸ್ ರೈಲುಗಳಲ್ಲಿ ಬೀದರ್-ಸಿಕಂದರಾಬಾದ್ ಹಾಗೂ ಪುರಿ-ಯಶವಂತಪುರ ರೈಲುಗಳು ಆಂಧ್ರಪ್ರದೇಶದಲ್ಲಿ ಸಂಚರಿಸುತ್ತವೆ.
ಅರಸೀಕೆರೆ ಪ್ಯಾಸೆಂಜರ್ ಹೊಸ ಪೇಟೆವರೆಗೆ ಮುಂದುವರಿಸಬೇಕಿತ್ತು. ಹರಿಹರ- ಶಿವಮೊಗ್ಗ ರೈಲು ಮಾರ್ಗ ಅಂತಿಮ ಸಮೀಕ್ಷೆ ಕಾರ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ಶಿವಮೊಗ್ಗ- ಶಿಕಾರಿಪುರ- ರಾಣೇಬೆನ್ನೂರು ಮಾರ್ಗದ ಘೋಷಣೆ ಅಗತ್ಯ ಇರಲಿಲ್ಲ. ಇದು ಜನರಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ. ದೇಶದ ಎಲ್ಲ ಮಾನವ ರಹಿತ ಲೆವೆಲ್ಕ್ರಾಸಿಂಗ್ಗಳನ್ನು 2014ರ ಒಳಗೆ ಮಾನವ ಸಹಿತ ಕ್ರಾಸಿಂಗ್ ಮಾಡುವ ಗುರಿಯನ್ನು ಮತ್ತೆ ಮೂರು ವರ್ಷ ಮುಂದೂಡಿರುವುದು ಬೇಸರದ ಸಂಗತಿ.
ಹರಿಹರದಿಂದ ಬೆಂಗಳೂರಿಗೆ ಇಂಟರ್ಸಿಟಿ ಟ್ರೈನ್ ಸಂಚಾರಕ್ಕೆ ಅನುಮತಿ ನೀಡದಿರುವುದು. ರೈಲ್ವೆ ಪ್ರಯಾಣದರ ಏರಿಸಿರುವುದು ಬೇಸರದ ಸಂಗತಿ. ಉತ್ತಮ ಬಜೆಟ್ ಮಂಡಿಸಲು ಇದ್ದ ಎಲ್ಲ ಅವಕಾಶಗಳನ್ನು ಕೇಂದ್ರ ಕಳೆದುಕೊಂಡಿದೆ.
-ಜಿ.ಎಂ. ಸಿದ್ದೇಶ್ವರ, ಲೋಕಸಭಾ ಸದಸ್ಯ
ಕೈಗೆಟಕುವ ಟಿಕೆಟ್; ಶ್ಲಾಘನೆ
ರೈಲ್ವೆ ಟಿಕೆಟ್ ಅಂಚೆ ಕಚೇರಿ ಸೇರಿದಂತೆ ವಿವಿಧೆಡೆ ಸುಲಭವಾಗಿ ಸಿಗುವಂತೆ ಹಲವು ಕಡೆ ಕೌಂಟರ್ ಆರಂಭಕ್ಕೆ ಅನುಮತಿ ನೀಡಿರುವುದು ಶ್ಲಾಘನೀಯ.
ಎರಡನೇ ದರ್ಜೆ ಪ್ರಯಾಣದರ, ಹಾಗೂ ಸ್ಲೀಪರ್ ಕೋಚ್ ಪ್ರಯಾಣದರ ಹೆಚ್ಚಿಸಬಾರದಿತ್ತು. ಉಳಿದ ಐಷಾರಾಮಿ ಪ್ರಯಾಣದರ ಹೆಚ್ಚಳ ಸ್ವಾಗತಾರ್ಹ.
-ಪ್ರೊ.ಬಿ.ಪಿ. ವೀರಭದ್ರಪ್ಪ, ದಾವಣಗೆರೆ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು.
ಜನಸ್ನೇಹಿ ಬಜೆಟ್
ರೈಲ್ವೆ ಬಜೆಟ್ ಆಶಾದಾಯಕ. ರೈಲ್ವೆ ಸುರಕ್ಷತೆಗೆ ಪ್ರಾಮುಖ್ಯ ನೀಡಲಾಗಿದ್ದು, ಅದಕ್ಕಾಗಿ ್ಙ 16 ಸಾವಿರ ಕೋಟಿ ಮೀಸಲಿಡಲಾಗಿದೆ. ರೈಲ್ವೆ ಸುರಕ್ಷತಾ ಪ್ರಾಧಿಕಾರ ರಚಿಸಲು ಮುಂದಾಗಿದೆ. ಮೂಲ ಸೌರ್ಯಕ್ಕೆ ಒತ್ತು ನೀಡಲಾಗಿದೆ. ಪ್ರಯಾಣಿಕರ ಸೌಲಭ್ಯಕ್ಕೆ ್ಙ 1,102 ಕೋಟಿ ನೀಡಲಾಗಿದೆ. 114 ಮಾರ್ಗಗಳ ಸಮೀಕ್ಷೆ, 1 ಸಾವಿರ ಹೊಸ ನಿಲ್ದಾಣಗಳ ಸ್ಥಾಪನೆಯ ಗುರಿ ಶ್ಲಾಘನೀಯ.
-ಡಿ. ಬಸವರಾಜ್, ಕೆಪಿಸಿಸಿ ಸದಸ್ಯ
ಜಿಲ್ಲೆಯ ಜನರಿಗೆ ವಂಚನೆ
ಹರಿಹರದಿಂದ ಬೆಂಗಳೂರಿಗೆ ಇಂಟರ್ಸಿಟಿ ಬೇಡಿಕೆ ಈಡೇರಿಲ್ಲ. ಹರಿಹರದಿಂದ ಕಾಶಿಗೆ- ಶಬರಿಮಲೆಗೆ ನೇರ ರೈಲು ಓಡಿಸುವ ಬೇಡಿಕೆಗೆ ಇಲಾಖೆ ಸ್ಪಂದಿಸಿಲ್ಲ. ಹರಿಹರ- ಶಿವಮೊಗ್ಗ, ದಾವಣಗೆರೆ- ತುಮಕೂರು ಮಾರ್ಗಕ್ಕೆ ್ಙ ಒಂದು ಸಾವಿರ ಕೋಟಿ ತೆಗೆದಿರಿಸಬೇಕು ಎನ್ನುವ ಪ್ರಸ್ತಾವಕ್ಕೆ ಕಿಮ್ಮತ್ತು ನೀಡಿಲ್ಲ.
-ಎಂ.ಎಸ್.ಕೆ. ಶಾಸ್ತ್ರಿ, ಡಿ. ಅಸ್ಲಾಂ, ಹುಬ್ಬಳ್ಳಿ ನೈರುತ್ಯ ರೈಲ್ವೆವಲಯದ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘ.
ಮತ್ತೊಂದು ನಿಲ್ದಾಣ ಬೇಕಿತ್ತು
ದಾವಣಗೆರೆ ಮಾರ್ಗದಲ್ಲಿ ಯಾವ ರೈಲು ಸಂಚರಿಸುತ್ತದೆ ಎನ್ನುವುದಕ್ಕಿಂತ ಮುಖ್ಯವಾಗಿ ರೈಲು ಮಾರ್ಗದಿಂದ ನಗರದ ಜನತೆಗೆ ಆಗಿರುವ ಅನ್ಯಾಯ ಸರಿ ಪಡಿಸಬೇಕಿದೆ. ಅಶೋಕ ಟಾಕೀಸ್ ರಸ್ತೆಯಲ್ಲಿ ಮೇಲು ಸೇತುವೆ. ಡಿಸಿಎಂ ಟೌನ್ಶಿಪ್ ಬಳಿ ಅಂಡರ್ಪಾಸ್ ಪುನರ್ ನಿರ್ಮಾಣ ಆಗಬೇಕಿದೆ. ನಗರದ ಹೊರ ವಲಯದಲ್ಲಿ ಎಸ್ಎಸ್ ಆಸ್ಪತ್ರೆ ಸಮೀಪ ಮತ್ತೊಂದು ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕಿತ್ತು.
-ಆಲೂರು ನಿಂಗರಾಜ್, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.