ADVERTISEMENT

ಕೈಮಗ್ಗ ಉತ್ಪನ್ನ ಖರೀದಿಗೆ ವಸ್ತ್ರದ್ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:50 IST
Last Updated 24 ಮಾರ್ಚ್ 2011, 8:50 IST

ಹರಿಹರ: ‘ಆರೋಗ್ಯ ದೃಷ್ಟಿಯಿಂದ ಕೃತಕ ಹತ್ತಿಯಿಂದ ತಯಾರಾದ ವಸ್ತ್ರಗಳಿಗಿಂತ ನೈಜ ಹತ್ತಿ, ಉಣ್ಣೆ ಹಾಗೂ ರೇಷ್ಮೆ ವಸ್ತ್ರಗಳ ಬಳಕೆ ಉತ್ತಮ’ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ, ಸರ್ಕಾರದ ನೇಕಾರರ ಸೇವಾ ಕೇಂದ್ರ ಹಾಗೂ ಜಿ.ಪಂ. ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತ್ರ ಪ್ರದರ್ಶನ ಮತ್ತು ಮಾರಾಟ ಮೇಳ ‘ವಸ್ತ್ರೋತ್ಸವ-2011’ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೇಕಾರರು ಉತ್ತಮ ಗುಣಮಟ್ಟದ’ ನವಿರಾದ’ ವೈವಿಧ್ಯಮಯ ವಸ್ತ್ರಗಳನ್ನು ಕಷ್ಟಪಟ್ಟು ನೇಯ್ಗೆ ಮಾಡುತ್ತಾರೆ. ಆದರೆ, ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುತ್ತಿಲ್ಲ. ಸರ್ಕಾರ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ನೇಕಾರರು ತಯಾರಿಸಿದ ವಸ್ತ್ರಗಳಿಗೆ ಜಿಲ್ಲಾಮಟ್ಟದಲ್ಲಷ್ಟೇ ಅಲ್ಲ ಅಂತರರಾಷ್ಟ್ರೀಯಮಟ್ಟದಲ್ಲೂ ಮಾರುಕಟ್ಟೆ ದೊರೆಯುತ್ತಿದೆ. ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಇಂತಹ ಮೇಳಗಳು ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿರುವುದು ಶ್ಲಾಘನಿಯ. ಇಂತಹ ಮೇಳಗಳಲ್ಲಿ ಸಾರ್ವಜನಿಕರು ವಸ್ತ್ರಗಳನ್ನು ಖರೀದಿಸುವ ಮೂಲಕ ನೇಕಾರರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಸಿಇಒ ಗುತ್ತಿ ಜಂಬುನಾಥ ಮಾತನಾಡಿ, ಮೇಳದಲ್ಲಿ ಭಾಗವಹಿಸಿರುವ ಒಂದೊಂದು ಸಂಘದ ಒಂದೊಂದು ಯಶಸ್ವಿ ಕಥೆ ಇದೆ. ಯಶಸ್ಸನ್ನು ಸಾಧಿಸಲು ಸಂಘದ ಕಟ್ಟಕಡೆಯ ಸದಸ್ಯನ ಶ್ರಮ ವಸ್ತ್ರಗಳಲ್ಲಿ ವಿನ್ಯಾಸಗೊಂಡಿರುವುದು ವ್ಯಕ್ತವಾಗುತ್ತದೆ. ಏಳು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೇಕಾರರನ್ನು ಪ್ರೋತ್ಸಾಹಿಸಬೇಕು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಝರೆಪ್ಪ ಜಿ. ಮೋಳಕೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸಪಾರೆ ಶ್ರೀನಿವಾಸ, ನೇಕಾರರ ಸೇವಾ ಕೇಂದ್ರದ ಉಪ ನಿರ್ದೇಶಕ ಪನ್ನೀರ್ ಸೆಲ್ವಂ, ತಹಶೀಲ್ದಾರ್ ಜಿ. ನಜ್ಮಾ, ಪೌರಾಯುಕ್ತ ಎಂ.ಕೆ. ನಲವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜ, ಎಇಇ ಮಹಮದ್ ಗೌಸ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.