ADVERTISEMENT

ಕ್ರಿಕೆಟ್‌ನಿಂದ ಪ್ರೇಕ್ಷಕರ ಕೊರತೆ: ಮಾಸ್ಟರ್ ಆನಂದ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 11:10 IST
Last Updated 25 ಫೆಬ್ರುವರಿ 2011, 11:10 IST

ದಾವಣಗೆರೆ: ‘5 ಈಡಿಯಟ್ಸ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶ್ವಕಪ್ ಕ್ರಿಕೆಟ್ ಹಾಗೂ ಪರೀಕ್ಷೆ ಹಿನ್ನೆಲೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರದ ನಿರ್ದೇಶಕ ಮಾಸ್ಟರ್ ಆನಂದ್ ಹೇಳಿದರು.ಚಿತ್ರವನ್ನು ರಾಜ್ಯದ ಕೇವಲ 5 ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರಿಯೆಯಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ. ಫೆ. 25ರಂದು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಶೇ. 30 ರಿಯಾಯಿತಿ ದರದ ಕೂಪನ್ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಅವರು ಚಿತ್ರಮಂದಿರಕ್ಕೆ ಆಗಮಿಸುತ್ತಿಲ್ಲ. ಉಳಿದಂತೆ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೆ ಉತ್ತರ ಕರ್ನಾಟಕದಾದ್ಯಂತ ಬಿಡುಗಡೆ ಮಾಡಲಾಗುವುದು. ಇಲ್ಲವಾದಲ್ಲಿ ಪ್ರದರ್ಶನ ನಿಲ್ಲಿಸಿ ಮೇ ವೇಳೆಗೆ ರಾಜ್ಯದಾದ್ಯಂತ ಬಿಡುಗಡೆ ಮಾಡಲಾಗುವುದು ಎಂದರು.

ಸಾಫ್ಟ್‌ವೇರ್ ಕ್ಷೇತ್ರ ಬಿದ್ದು ಹೋದಾಗ ನಿರುದ್ಯೋಗಿ ಯುವಕರು ಅಡ್ಡದಾರಿ ಹಿಡಿಯುವುದು, ಅದು ಯಾವಮಟ್ಟಕ್ಕೆ ಮುಂದುವರಿಯುತ್ತದೆ ಎಂಬುದನ್ನು ಹಾಸ್ಯದ ರೂಪದಲ್ಲಿ ಚಿತ್ರದಲ್ಲಿ ನಿರೂಪಿಸಲಾಗಿದೆ. ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಸವಾಲಿನಿಂದ ಕೂಡಿದ್ದು, ಇಡೀ ಚಿತ್ರತಂಡ ಚೆನ್ನಾಗಿ ಕೆಲಸ ಮಾಡಿದೆ. ನಿರ್ದೇಶನಕ್ಕೆ ಮೋಹನ್ ಮಾಳಿಗೆ ಅವರ ಸಹಕಾರ ಸ್ಮರಣೀಯ. ಅಂತೆಯೇ ನಿರ್ಮಾಪಕರೂ ಧೈರ್ಯ ಮಾಡಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಪಾಳೇಗಾರ್, ಅಂಬರೀಶ್ ಆರಾಧ್ಯ, ನಿರ್ಮಾಪಕ ಲೋಕೇಶ್ ಮೂರ್ತಿ, ವಾಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.