ADVERTISEMENT

ಚಾಲಕರಿಂದ ಆರ್‌ಟಿಒ ಕಚೇರಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:00 IST
Last Updated 1 ಆಗಸ್ಟ್ 2012, 5:00 IST

ದಾವಣಗೆರೆ: ಆಟೋ ಚಾಲಕರಿಗೆ ಪರವಾನಗಿ ಪಡೆಯಲು ಶಿಕ್ಷಣ ಪ್ರಮಾಣಪತ್ರ ಕೇಳುವುದನ್ನು ವಿರೋಧಿಸಿ ಹಾಗೂ ಆಟೋಸ್ಟ್ಯಾಂಡ್, ವಿಶ್ರಾಂತಿಗೃಹ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಆಟೋರಿಕ್ಷಾ ಮತ್ತು ಟ್ಯಾಕ್ಸಿ, ಟ್ರಕ್ ಚಾಲಕರ ಯೂನಿಯನ್ ನೇತೃತ್ವದಲ್ಲಿ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಲಾಯಿತು.

ಜಿಲ್ಲೆಯಲ್ಲಿ ಆಟೋ ಚಾಲಕರು ದಿನನಿತ್ಯ ಸಾರ್ವಜನಿಕ ಸೇವೆಯಲ್ಲಿ ತೊಡಗಿರುತ್ತಾರೆ. ಸರ್ಕಾರಕ್ಕೂ ಇವರಿಂದ ಸಾಕಷ್ಟು ಆದಾಯ ಬರುತ್ತದೆ. ಆದರೆ, ಅದೆಷ್ಟೋ ನಿರುದ್ಯೋಗಿ ಯುವಕರು ಆಟೋರಿಕ್ಷಾ ಚಾಲನಾ ಪರವಾನಗಿ ಕೇಳಲು ಹೋದರೆ 8ನೇ ತರಗತಿಯ ವ್ಯಾಸಂಗ ಪ್ರಮಾಣಪತ್ರ ಕೇಳಲಾಗುತ್ತಿದೆ. ಅಲ್ಲದೇ, ಆಟೋ ಚಾಲನಾ ಪ್ರಮಾಣಪತ್ರ ಪಡೆಯಲು ಕಾರು ಚಾಲನಾ ಪ್ರಮಾಣಪತ್ರ ಕೇಳಲಾಗುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಎಲ್ಲ ಆಟೋರಿಕ್ಷಾಗಳಿಗೆ ಸಿಎನ್‌ಜಿ ಅನಿಲ ಕಿಟ್ ಅಳವಡಿಸಲು ರೂ.25 ಸಾವಿರ ಬಡ್ಡಿರಹಿತ ಸಾಲ ನೀಡಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಬೇಕು. ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗುವ ವ್ಯವಸ್ಥೆ ನಿರ್ಮಾಣವಾಗಬೇಕು. ಆಟೋರಿಕ್ಷಾ ಚಾಲಕರಿಗೆ ಅಲ್ಲಲ್ಲಿ ವಿಶ್ರಾಂತಿಗೃಹ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಆವರಗೆರೆ ವಾಸು, ಸೈಯದ್ ಖಾಜಾಪೀರ್, ಕೆ.ಜಿ. ಉಮೇಶ್ ಆವರಗೆರೆ, ಬಿ.ಎಸ್. ಅಬ್ದುಲ್ ರಹಮಾನ್, ಸಿ. ರಮೇಶ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.