ADVERTISEMENT

ಜಿಲ್ಲೆಯಲ್ಲಿ ‘ಮಿಂಚಿನ ನೋಂದಣಿ’ ಅಭಿಯಾನ

ನೂರಾರು ಅರ್ಜಿಗಳ ಸ್ವೀಕಾರ, ಕೆಲವೆಡೆ ಮತಗಟ್ಟೆ ಅಧಿಕಾರಿಗಳ ಗೈರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:34 IST
Last Updated 9 ಏಪ್ರಿಲ್ 2018, 7:34 IST

ದಾವಣಗೆರೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಭಾನುವಾರ ‘ಮಿಂಚಿನ ನೋಂದಣಿ’ ಅಭಿಯಾನ ಆರಂಭವಾಯಿತು. ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದ ಮತದಾರರು ಹೆಸರು ಸೇರಿಸಲು ಅರ್ಜಿ ಸಲ್ಲಿಸಿದರು.

ಒಟ್ಟು 11,500 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಏಪ್ರಿಲ್‌ 14ರ ತನಕ ಅಭಿಯಾನ ನಡೆಯಲಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಿಂಚಿನ ನೋಂದಣಿ’ಗೆ ಅಧಿಕಾರಿಗಳ ಗೈರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಲುವಾಗಿ ನಗರದಲ್ಲಿ ಭಾನುವಾರ ಆರಂಭವಾದ ‘ಮಿಂಚಿನ ನೋಂದಣಿ’ ಅಭಿಯಾನದಲ್ಲಿ ಬೂತ್‌ ಮಟ್ಟದ ಕೆಲ ಅಧಿಕಾರಿಗಳು (ಬಿಎಲ್‌ಒ) ಭಾಗವಹಿಸದೇ ಇದ್ದಿದ್ದರಿಂದ ಮತದಾರರು ತೊಂದರೆ ಅನುಭವಿಸಿದರು.

ADVERTISEMENT

ದಕ್ಷಿಣ ವಿಧಾನಸಭಾ ಕ್ಷೇತ್ರದ ಬೂತ್‌ ನಂ 123 ವ್ಯಾಪ್ತಿಯ ಮುನ್ಸಿಪಲ್‌ ಪಿಯು ಕಾಲೇಜು ಆವರಣದಲ್ಲಿ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 11ಕ್ಕೆ ಮತದಾರರು ಹಾಜರಿದ್ದರೂ ಸಂಬಂಧಿಸಿದ ಬಿಎಲ್‌ಒ ಬಂದಿರಲಿಲ್ಲ. ಅಧಿಕಾರಿಯನ್ನು ಕಾದು ಕಾದು ಬೇಸತ್ತು ಮತದಾರರು ಹಿಂತಿರುಗಿದ್ದಾರೆ.

ಕೆ.ಬಿ.ಬಡಾವಣೆಯ ಬೂತ್ ನಂ 90, 92 ಹಾಗೂ 93 ವ್ಯಾಪ್ತಿಯ ಮತದಾರರಿಗೆ ಅನುಕೂಲವಾಗಲು ಇಲ್ಲಿನ ಕಾವೇರಮ್ಮ ಸ್ಕೂಲ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಮೂವರು ಬಿಎಲ್‌ಒಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಭಾಗವಹಿಸಿದ್ದು ಬಿಎಲ್‌ಒ ಕೊಟ್ರೇಶ್‌ ಮಾತ್ರ. ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ವಿಳಾಸ ಪರಿಶೀಲನೆಗಾಗಿ 100ಕ್ಕೂ ಹೆಚ್ಚು ಮತದಾರರು ಸೇರಿದ್ದರು. ಬಿಎಲ್‌ಒ ಒಬ್ಬರೆ ಇದ್ದುದರಿಂದ ಮತದಾರರ ಹಾಗೂ ಬಿಎಲ್‌ಒ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು.

‘ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗಾಗಿಯೇ ಊರಿಂದ ಬಂದಿದ್ದೇವೆ. ಮತದಾರರ ಪಟ್ಟಿ ಇಲ್ಲ. ಅಧಿಕಾರಿಗಳೂ ಇಲ್ಲ. ಈ ರೀತಿಯಾದರೆ ಹೇಗೆ’ ಎಂದು ಕಾವೇರಮ್ಮ ಶಾಲೆಯ ಮತಗಟ್ಟೆ ಕೇಂದ್ರದಲ್ಲಿದ್ದ ಮತದಾರ ಕೃಷ್ಣಮೂರ್ತಿ ಪ್ರಶ್ನಿಸಿದರು.

ಮಧ್ಯಾಹ್ನ ನಂತರ ಬಿಎಲ್‌ಒ ಭೀಮೇಶ್‌ ಮತಗಟ್ಟೆಗೆ ಬಂದು ಮತದಾರರ ಪಟ್ಟಿಯ ಪರಿಶೀಲನೆ ನಡೆಸಿದರು. ಮತ್ತೊಬ್ಬ ಬಿಎಲ್‌ಒ ರಮೇಶ್‌ ಗೈರಾಗಿದ್ದರು.

‘ಬೆಳಿಗ್ಗೆ 10ಕ್ಕೆ ಮತಗಟ್ಟೆ ಕೇಂದ್ರಕ್ಕೆ ಬಂದಿದ್ದೆ. ಆದರೆ, ಆರೋಗ್ಯ ಸಮಸ್ಯೆ ಉಂಟಾದ ಕಾರಣ. ವಾಪಸ್ಸು ಮನೆಗೆ ಮರಳಿದೆ’ ಎಂದು ರಮೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.