ಚನ್ನಗಿರಿ: ತಾಲ್ಲೂಕಿನಾದ್ಯಂತ ಯಾವುದೇ ಗ್ರಾಮದೊಳಗೆ ಕಾಲಿಟ್ಟರೆ ಸಾಕು, ಕೆಟ್ಟು ದುರಸ್ತಿಯ ಭಾಗ್ಯವನ್ನು ಕಾಣದೇ ಅನಾಥವಾಗಿ ನಿಂತಿರುವ ಕೈಪಂಪ್ಗಳು ಕಂಡುಬರುತ್ತವೆ. ತಾಲ್ಲೂಕಿನ ನೀತಿಗೆರೆ ಗ್ರಾಮದ ಬಸ್ನಿಲ್ದಾಣದ ಸಮೀಪ ಇರುವ ಕೈಪಂಪ್ ಕೆಟ್ಟು ಒಂದು ವರ್ಷ ಆಗಿದೆ. ಆದರೆ, ಇನ್ನೂ ದುರಸ್ತಿಯ ಭಾಗ್ಯ ಕಂಡಿಲ್ಲ. ಇದು ನಮ್ಮ ಗ್ರಾಮ ಪಂಚಾಯ್ತಿಗಳ ನಿರ್ಲಕ್ಷ್ಯಕ್ಕೆ ತಾಜಾ ಉದಾಹರಣೆಯಾಗಿದೆ.
ಈ ಹಿಂದೆ ಅಂದರೆ ಐದಾರು ವರ್ಷಗಳ ಹಿಂದೆ ಇಡೀ ತಾಲ್ಲೂಕಿನ ಕೈಪಂಪ್ಗಳ ದುರಸ್ತಿಯನ್ನು ತಾಲ್ಲೂಕು ಪಂಚಾಯ್ತಿ ವತಿಯಿಂದ ಪಂಚಾಯತ್ ರಾಜ್ ಇಲಾಖೆಯವರು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದರು. ದುರಸ್ತಿಯ ಕಾರ್ಯವನ್ನು ಪಂಚಾಯತ್ ರಾಜ್ ಇಲಾಖೆಯಿಂದ ತಪ್ಪಿಸಿ ಆಯಾ ಗ್ರಾಮ ಪಂಚಾಯ್ತಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ವಹಿಸಿತು. ಅಂದಿನಿಂದ ಕೈಪಂಪ್ಗಳು ಕಾಲ ಕಾಲಕ್ಕೆ ದುರಸ್ತಿ ಕಾಣದೇ ಗ್ರಾಮಗಳನ್ನು ಅನಾಥವಾಗಿ ನಿಂತಿವೆ.
ಇತ್ತ ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಉದ್ಭವಿಸಿದೆ. ಬೆಳಿಗ್ಗೆ 4ರಿಂದ ಹಾಗೂ ರಾತ್ರಿ 3 ಗಂಟೆ ತ್ರೀಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಎಲ್ಲಾ ಗ್ರಾಮಗಳಲ್ಲೂ ಕುಡಿಯುವ ನೀರಿನ ತೊಂದರೆ ಉಂಟಾಗುತ್ತದೆ. ಗ್ರಾಮಗಳಲ್ಲಿರುವ ಕೈಪಂಪ್ಗಳಿಂದ ನೀರನ್ನು ತೆಗೆದುಕೊಂಡು ಉಪಯೋಗಿಸಲು ಕೈಪಂಪ್ಗಳು ದುರಸ್ತಿಯನ್ನು ಕಾಣದೇ ಹಲವಾರು ವರ್ಷಗಳಾಗಿವೆ.
ಗ್ರಾಮ ಪಂಚಾಯ್ತಿಯವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕೈಪಂಪ್ಗಳ ದುರಸ್ತಿಯ ಬಗ್ಗೆ ಕಾಳಜಿ ವಹಿಸಿಲ್ಲ. ಈ ಕಾರಣದಿಂದ ತಾಲ್ಲೂಕಿನಾದ್ಯಂತ ಸಾಕಷ್ಟು ಗ್ರಾಮಗಳಲ್ಲಿ ಕೈಪಂಪ್ಗಳು ಅನಾಥವಾಗಿ ಕೆಟ್ಟು ನಿಂತಿವೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಪುನಃಹ ಕೈಪಂಪ್ಗಳ ದುರಸ್ತಿಯನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸಿದರೆ ಉತ್ತಮ ಎನ್ನುತ್ತಾರೆ ನೀತಿಗೆರೆ ಗ್ರಾಮದ ರಾಜಶೇಖರ್, ಶಿವಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.