ADVERTISEMENT

ದೇವದಾಸಿ ಪದ್ಧತಿ: ಸಾಮಾಜಿಕ ಅಸ್ವಸ್ಥತೆಯ ಕುರುಹು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 6:00 IST
Last Updated 8 ಫೆಬ್ರುವರಿ 2012, 6:00 IST

ಹರಪನಹಳ್ಳಿ: ಆರ್ಥಿಕ ದುರ್ಬಲತೆ, ಸಾಮಾಜಿಕ ಅಸ್ಥಿರತೆ ಹಾಗೂ ಅಕ್ಷರ ಸಂಸ್ಕೃತಿಯಿಂದ ದೂರ ಉಳಿದಿರುವ ಶೋಷಿತ ಹಾಗೂ ತಳ ಸಮುದಾಯಗಳನ್ನು ದೇವದಾಸಿ ಪದ್ಧತಿಯಂತಹ ಸಂಪ್ರದಾಯದ ಹೆಸರಿನಲ್ಲಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜದ ಅಂಗವೈಕಲ್ಯತೆಗೆ ಸಾಕ್ಷಿ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಅಭಿಪ್ರಾಯಪಟ್ಟಿದೆ.

ಭಾರತ ಹುಣ್ಣಿಮೆ ಅಂಗವಾಗಿ ಮಂಗಳವಾರ ತಾಲ್ಲೂಕಿನ ಐತಿಹಾಸಿಕ ಉಚ್ಚಂಗಿದುರ್ಗ ಉತ್ಸವಾಂಬ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಹುಣ್ಣಿಮೆ, ಜಾತ್ರೆಯಂತಹ ಧಾರ್ಮಿಕ ಆಚರಣೆಯಲ್ಲಿ ದೇವಿಯ ಹೆಸರಿನಲ್ಲಿ ಇಂತಹ ಅನಿಷ್ಠ ಪದ್ಧತಿಗಳು ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮಾಯಕ ತಳಸಮುದಾಯದ ಯುವತಿಯರ ಬದುಕು ಅರಳುವ ಮುನ್ನವೇ ಕಮರಬಾರದು ಹಾಗೂ ಈ ಅನಿಷ್ಠ ಪರಂಪರೆಗೆ ವಿಧಾಯ ಹೇಳಲು ಹಾಗೂ ಈ ಪದ್ಧತಿಯಿಂದ ಉಂಟಾಗುವ ಸಾಮಾಜಿಕ ಹಾಗೂ ಮಾನಸಿಕ ವಿಘಟನೆಗಳ ಕುರಿತು, `ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ~ದ ಜಿಲ್ಲಾ ಘಟಕ ಪದಾಧಿಕಾರಿಗಳು ಹಾಗೂ ಸಿಪಿಐ(ಎಂ) ಪಕ್ಷದ ಅಂಗ ಸಂಘಟನೆಗಳ ಕಾರ್ಯಕರ್ತರು `ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಜನಜಾಗೃತಿ ಆಂದೋಲನ~ ನೆರೆದ ಜನಸಮುದಾಯದಲ್ಲಿ ಅನಿಷ್ಠ ಪದ್ಧತಿಯ ವಿರುದ್ಧ ಅರಿವು ಮೂಡಿಸಿದರು.

ಶೋಷಣೆಯ ಕುಲುಮೆಯಲ್ಲಿ ಬಸವಳಿದಿರುವ ಸಮುದಾಯವವನ್ನು ಪಾಪಕೂಪದ ದವಡೆಯಿಂದ ಬಿಡುಗಡೆ ಮಾಡುವುದು ಸಾಮಾಜಿಕ ಜವಾಬ್ದಾರಿ ಎಂದು ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ ಹೇಳಿದರು.

ಸಂಘಟನೆಯ ಪದಾಧಿಕಾರಿಗಳು ಕರಪತ್ರಗಳನ್ನು ಹಂಚುವ ಮೂಲಕ ಹಾಗೂ ಜಾಗೃತಿ ಸಭೆಯ ಮುಖಾಂತರ ಜನರಲ್ಲಿ ಅರಿವು ಮೂಡಿಸಿದರು.

ಆಂದೋಲನದಲ್ಲಿ ದೇವದಾಸಿ ಮಹಿಳೆಯರ ಪುನರ್‌ವಸತಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಮೋಕ್ಷಪತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದೇಶಪ್ಪ, ಸಂಘಟನೆಯ ರಾಜ್ಯ ಘಟಕದ ಸಲಹೆಗಾರ ಯು. ಬಸವರಾಜ್, ಮುಖಂಡರಾದ ಟಿ.ವಿ. ರೇಣುಕಮ್ಮ, ಎ.ಕೆ. ಚೌಡಮ್ಮ, ಭಾರತ ಯುವಜನ ಫೆಡರೇಷನ್ ಸಂಘಟನೆಯ ಮುಖಂಡ ವೆಂಕಟೇಶ್ ಬೇವಿನಹಳ್ಳಿ, ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕೃತ ಕಲಾವಿದೆ ಬೊಮ್ಮಾಳ್ ಎಲಿಸವ್ವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.