ADVERTISEMENT

ನಿದ್ದೆಗೆಡಿಸಿದ ರೈಲು ಮಾರ್ಗದ ಸರ್ವೆಕಾರ್ಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 5:35 IST
Last Updated 16 ಏಪ್ರಿಲ್ 2012, 5:35 IST

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಹರಳಹಳ್ಳಿ, ಮೂಡಲ ಬಸವಾಪುರ ಗ್ರಾಮದ ಜಮೀನುಗಳಲ್ಲಿ ಹರಿಹರ - ಶಿವಮೊಗ್ಗ ರೈಲುಮಾರ್ಗದ ಅಂತಿಮ ಹಂತದ ಸರ್ವೆ ಕಾರ್ಯ ಶುಕ್ರವಾರ ಭರದಿಂದ ಸಾಗಿದೆ.

ಪೂನಾ ಮೂಲದ ಆದಿತ್ಯ ಸಂಸ್ಥೆ ಸರ್ವೆ ಕಾರ್ಯ ಕೈಗೆತ್ತಿಕೊಂಡಿದೆ. ಈಗಾಗಲೇ ಮೊದಲ ಹಂತದ ಸರ್ವೆ ಕೆಲಸ 2 ವರ್ಷದ ಹಿಂದೆ ಮುಕ್ತಾಯವಾಗಿದೆ. ನಾಲ್ಕಾರು ಸಿಬ್ಬಂದಿ ಸ್ವಯಂಚಾಲಿತ ಯಂತ್ರದೊಂದಿಗೆ ಅಂತಿಮ ಹಂತದ ಭೂಮಾಪನಾ ಕಾರ್ಯ ನಡೆಸುತ್ತಿದ್ದಾರೆ.

ಆತಂಕ: ಭದ್ರಾ ನಾಲೆಯ  ಕೃಪೆಯಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರವ ಭತ್ತದ ಗದ್ದೆಗಳಲ್ಲಿ ರೈಲು ಮಾರ್ಗದ ಭೂಮಾಪನ ಕೆಲಸ ರೈತರಲ್ಲಿ ಆತಂಕ ಮೂಡಿಸಿದೆ. ಯೋಜನೆಗೆ ಎಷ್ಟು ಜಮೀನು ರೈಲ್ವೆ ಇಲಾಖೆ ವಶಪಡಿಸಿಕೊಳ್ಳುತ್ತಿದೆ. ಯಾವ ಭಾಗದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ವಿವರ ಈವರೆಗೆ ತಿಳಿದಿಲ್ಲ.

ಈಗಾಗಲೇ ಭದ್ರಾ ನಾಲೆಗೆ 60ರ ದಶಕದಲ್ಲಿ ಸಾಕಷ್ಟು ಜಮೀನು ವಶಪಡಿಸಿಕೊಳ್ಳಲಾಗಿದೆ.
ಈಗ ಪುನಃ ರೈಲು ಮಾರ್ಗ ನಿರ್ಮಾಣಕ್ಕೆ ಜಮೀನು ನೀಡಬೇಕಾಗುತ್ತದೆ. ಜತೆಗೆ ಕೂಡು ರಸ್ತೆ ನಿಲ್ದಾಣದಕ್ಕೂ ಜಮೀನು ಭೂಸ್ವಾಧೀನವಾಗಲಿದೆ.

ಯೋಜನೆಯಿಂದ ಜನತೆಗೆ ಅನುಕೂಲವಾಗಲಿದೆ. ಆದರೆ, ಕೃಷಿಕರಿಗೆ ಮಾತ್ರ ನಷ್ಟವಾಗಲಿದೆ. ಸರ್ಕಾರದ ಭೂಸ್ವಾಧೀನದ ಯೋಜನೆ ಕುರಿತು ಸರಿಯಾದ ಮಾಹಿತಿ ಯಾವ ಅಧಿಕಾರಿಯೂ ನೀಡುತ್ತಿಲ್ಲ. ರೈಲುಮಾರ್ಗದ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿ ಗೊಂದಲ ನಿವಾರಿಸುವಂತೆ ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.