ಹರಿಹರ: ಕೃಷಿಕ ಸಮಾಜ ಕೆಲವು ವ್ಯಕ್ತಿಗಳಿಗೆ ಸೀಮಿತಗೊಂಡ ಕಾರಣ, ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಶಾಸಕ ಎಚ್.ಎಸ್.ಶಿವಶಂಕರ್ ಬೇಸರ ವ್ಯಕ್ತಪಡಿಸಿದರು. ನಗರದ ತಾಲ್ಲೂಕು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ನಡೆದ ತಾಲ್ಲೂಕು ಕೃಷಿಕ ಸಮಾಜದ ಕಟ್ಟಡಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಕ ಸಮಾಜ ಜಾತಿ ಅಥವಾ ಪಕ್ಷಕ್ಕೆ ಸೀಮಿತಗೊಳ್ಳದ ಕಾಯಕವನ್ನು ನಂಬಿರುವ ಸಮಾಜ. ಆದರೆ, ತಾಲ್ಲೂಕಿನಲ್ಲಿ ಕೃಷಿಕ ಸಮಾಜ ಕೆಲವು ವ್ಯಕ್ತಿಗಳಿಗೆ ಸೀಮಿತಗೊಂಡು ಅಭಿವೃದ್ಧಿಯಾಗಿಲ್ಲ. ರೈತಾಪಿ ವರ್ಗದವರಿಗೆ ಪಕ್ಷ ಅಥವ ಜಾತಿ ಬೇಧ ಮರೆತು ಕೃಷಿಕ ಸಮಾಜದ ಸದಸ್ಯರಾಗುವ ಅವಕಾಶ ನೀಡಿದಾಗ ಕೃಷಿಕ ಸಮಾಜದ ಕಲ್ಪನೆ ಸಾರ್ಥಕವಾಗುತ್ತದೆ ಎಂದರು.
ಸರ್ಕಾರ, ರೈತರ ಸಂಪೂರ್ಣ ಸಾಲಮನ್ನ ಮಾಡುವಂತೆ ಆಗ್ರಹಿಸಿ ಕೃಷಿಕ ಸಮಾಜ ಹೋರಾಟ ನಡೆಸಬೇಕು. ಪ್ರತಿಯೊಬ್ಬ ರೈತನಿಗೂ ಸರ್ಕಾರ ಸೌಲಭ್ಯಗಳನ್ನು ದೊರಕಿಸಿಕೊಡಲು ಈ ಸಮಾಜ ನಿರಂತರವಾಗಿ ಹೋರಾಟ ನಡೆಸಬೇಕು. ರೈತರು ಸಂಪೂರ್ಣ ಸಾಲಮನ್ನಾ ಕೃಷಿಕ ಸಮಾಜದ ಸಾಧನೆಯಾಗಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ, ಎಪಿಎಂಸಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಿ.ಮಹಾದೇವಗೌಡ, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ಮಂಜುನಾಥಗೌಡ, ಸದಸ್ಯ ಡಿ.ಎಲ್.ನಾಗರಾಜ ವಡೂರು, ರಾಜ್ಯ ಪ್ರತಿನಿಧಿ ಬಿ.ವಿರೂಪಾಕ್ಷಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ರುದ್ರೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಮಂಜುನಾಥ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವಿ.ಪಿ.ಗೋವರ್ಧನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.