ADVERTISEMENT

ಮದ್ಯಮಾರಾಟದ ಹಣ ಶಿಕ್ಷಣಕ್ಕೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:30 IST
Last Updated 3 ಅಕ್ಟೋಬರ್ 2011, 5:30 IST

ಹರಿಹರ: `ಸಂಪೂರ್ಣ ಪಾನ ನಿಷೇಧ ಮಹಾತ್ಮ ಗಾಂಧೀಜಿ ಅವರ ಪ್ರಬಲ ಆಕಾಂಕ್ಷೆಯಾಗಿತ್ತು~ ಎಂದು  ನಿವೃತ್ತ ಶಿಕ್ಷಕ ಹಬೀಬುಲ್ಲಾ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮದ್ಯದ ಅಂಗಡಿಗಳಿಂದ ಬಂದ ಲಾಭದಿಂದ ದೇಶದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದಕ್ಕಿಂತ ನಾಚಿಕೆಗೇಡಿನ ಕೆಲಸ ಮತ್ತೊಂದಿಲ್ಲ. ಆದಾಯ ಬರುತ್ತದೆ ಎಂದು ಕಂಡ ಕಂಡ ಕಡೆಗೆಲ್ಲಾ ಮದ್ಯದ ಅಂಗಡಿಗೆ ಪರವಾನಿಗಿ ನೀಡುವುದು ತಪ್ಪು. ಒಂದು ಗಂಟೆಗಳ ಕಾಲ ದೇಶದ ಸಂಪೂರ್ಣ ಅಧಿಕಾರ ದೊರೆತರೆ, ಯಾವುದೇ ಪರಿಹಾರ ನೀಡದೇ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದೆ ಎಂಬ ಗಾಂಧೀಜಿ ಅವರ ಹೇಳಿಕೆ ಮದ್ಯ ವಿರೋಧಿ ತತ್ವವನ್ನು ಎತ್ತಿ ಹಿಡಿಯುತ್ತವೆ ಎಂದರು.

ದೇಶದಲ್ಲಿ ಅನೇಕ ಬುದ್ಧಿಜೀವಿಗಳು, ಮುತ್ಸದ್ದಿ ರಾಜಕಾರಣಿಗಳು ಹಾಗೂ ಮಹಾನ್ ಚಿಂತಕರು ಇದ್ದರೂ, ಸರ್ಕಾರಕ್ಕೆ ಶೇಖರಣೆಯಾಗುವ ಮದ್ಯದ ಆದಾಯಕ್ಕೆ ಪರ್ಯಾಯ ಆದಾಯ ರೂಪಿಸಲು ವಿಫಲರಾಗಿದ್ದಾರೆ.
ನೈತಿಕಪ್ರಜ್ಞೆ ಇಲ್ಲದ, ಪ್ರಪಂಚ ಆಳುವ ಬುದ್ಧಿವಂತಿಕೆಯಿಂದ ಪ್ರಯೋಜ ಏನು? ಭ್ರಷ್ಟ ರಾಜಕಾರಣಿಗಳು ಮತ, ಜಾತಿಗಳ ಮಧ್ಯೆ ಬಿರುಕು ಮೂಡಿಸುವ ಮೂಲಕ ಅಧಿಕಾರಕ್ಕೇರುತ್ತಿದ್ದಾರೆ. ಜಾತಿ-ಮತಗಳ ಭೇದಭಾವ ಮರೆತು ಎಲ್ಲರೂ ಒಂದಾಗಿ ಬಾಳಿದಾಗ ದೇಶದ ಪ್ರಗತಿ, ಐಕ್ಯತೆ ಹಾಗೂ ಅಭಿವೃದ್ಧಿ ನಿಶ್ಚಿತ ಎಂದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕೀರ್ತಿ ಮಹಾತ್ಮ ಗಾಂಧೀಜಿ ಅವರಿಗೆ ಸಲ್ಲುತ್ತದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲಿ  ನಡೆದ ವರ್ಣಭೇದ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ನಗರಸಭೆ ಅಧ್ಯಕ್ಷ ಅಬ್ದುಲ್ ರೆಹಮಾನ್‌ಖಾನ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸೋಮಸುಂದರಪ್ಪ, ಸ್ವಾತಂತ್ರ್ಯ ಹೋರಾಟಗಾರ ಎನ್.ಎಂ. ಚಂದ್ರಶೇಖರಯ್ಯ, ಪಾದ್ರಿ ಸ್ಟ್ಯಾನಿ ಡಿ~ಸೋಜಾ, ತಹಶೀಲ್ದಾರ್ ಜಿ. ನಜ್ಮಾ, ಇಒ ಎಚ್.ಎನ್. ರಾಜ್, ಪೌರಾಯುಕ್ತ ಎಂ.ಕೆ. ನಲವಡಿ, ಸಿಪಿಐ ನಾಗೇಶ್ ಐತಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.