ದಾವಣಗೆರೆ: ‘ನಮ್ಮ ಪ್ರದೇಶಕ್ಕೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ನಾವು ಮತದಾನ ಬಹಿಷ್ಕರಿಸಿದ್ದೇವೆ. ದಯವಿಟ್ಟು ಮತ ಕೇಳಲು ಬರಬೇಡಿ...’ ಹೀಗೊಂದು ಭಿತ್ತಿಪತ್ರ ದಾವಣಗೆರೆಯ ವಾರ್ಡ್ 18ರ ವಿನಾಯಕ ನಗರದ ‘ಎ’ ಬ್ಲಾಕ್ನ ಪ್ರತಿಯೊಂದು ಮನೆ, ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿದೆ.
‘ಈ ಪ್ರದೇಶದಲ್ಲಿ ಚರಂಡಿ, ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪಾಲಿಕೆ ಹಾಗೂ ಸರ್ಕಾರ ಕಲ್ಪಿಸಿಲ್ಲ. ಈ ಬಗ್ಗೆ ಇದೇ ಪ್ರದೇಶದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ, ತಹಶೀಲ್ದಾರ್, ಪಾಲಿಕೆ ಆಯುಕ್ತರು, ಮೇಯರ್ ಎಲ್ಲರನ್ನೂ ಭೇಟಿ ಮಾಡಿದ್ದೇವೆ. ಯಾರಿಂದಲೂ ಸ್ಪಂದನೆ ಸಿಗಲಿಲ್ಲ. ಹಾಗಾಗಿ, ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ’ ಎನ್ನುತ್ತಾರೆ ದಾವಣಗೆರೆಯ ವಿನಾಯಕ ನಗರ ‘ಎ’ ಬ್ಲಾಕ್ ನಿವಾಸಿಗಳ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ ದಾನೇಶ್.
ವಿನಾಯಕ ನಗರ ‘ಎ’ ಬ್ಲಾಕ್ ವ್ಯಾಪ್ತಿ ರಿಂಗ್ ರಸ್ತೆಯಿಂದ ಪಿ.ಬಿ. ರಸ್ತೆಯವರೆಗೆ ಇದೆ. ಸುಮಾರು 100 ಮನೆಗಳು ಇಲ್ಲಿವೆ. ಎಲ್ಲರೂ ಚರ್ಚಿಸಿಯೇ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಈ ವಿಷಯ ತಿಳಿದು ಮಂಗಳವಾರ ಬೆಳಿಗ್ಗೆ ನಮ್ಮ ವಾರ್ಡ್ ಹಾಗೂ ಪಕ್ಕದ ವಾರ್ಡಿನ ಸದಸ್ಯರು ಬಂದು ವಿಚಾರಿಸಿಕೊಂಡು ಹೋದರು ಅಷ್ಟೇ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಇದು ಯಾರೊಬ್ಬರ ಮೇಲಿನ ದ್ವೇಷದಿಂದ ತೆಗೆದುಕೊಂಡ ತೀರ್ಮಾನ ಅಲ್ಲ. ಮತದಾನ ಮಹತ್ವದ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಆದರೆ, ಈ ಮಾರ್ಗ ಅನುಸರಿಸದೆ ಬೇರೆ ದಾರಿ ಕಾಣುತ್ತಿಲ್ಲ’ ಎಂದು ಅವರು ವಿಷಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.