ಹರಿಹರ: ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಕೆಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ಕುಟುಂಬ ಸಮೇತರಾಗಿ ಶುಕ್ರವಾರ ತಹಶೀಲ್ದಾರ ಕಚೇರಿಯಲ್ಲಿ ಚುನಾವಣಾಧಿಕಾರಿ ವಿ. ನಾಗರಾಜ ಅವರಿಗೆ ನಾಮಪತ್ರ ಸಲ್ಲಿಸಿದರು.
ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಕೆಜೆಪಿ ಚುನಾವಣಾ ಪ್ರಚಾರ ಕಚೇರಿಯನ್ನು ಬೆಳಗ್ಗೆ 9.30ಕ್ಕೆ ಪೂಜೆ ಮಾಡಿ ಉದ್ಘಾಟಿಸಿದರು. ನಂತರ, ಗ್ರಾಮದೇವತೆ ದೇವಸ್ಥಾನ, ಆರೋಗ್ಯಮಾತೆ ಚರ್ಚೆ, ನಾಡಬಂದ್ ಷಾ ವಲಿ ದರ್ಗಾ ಹಾಗೂ ಹರಿಹರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಹರಿಹರೇಶ್ವರ ದೇವಸ್ಥಾನ ಆವರಣದಿಂದ ಎತ್ತಿನಗಾಡಿಯಲ್ಲಿ ಕೆಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ಅಭಿಮಾನಿಗಳೊಂದಿಗೆ ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಅನುರಾಧಾ, ಪುತ್ರ ಅರ್ಜುನ್, ಪುತ್ರಿ ಅನುಷಾ ಹಾಗೂ ಕೆಜೆಪಿ ಮುಖಂಡ ಮಾಲತೇಶ್. ಜಿ. ಭಂಡಾರೆ ಹಾಜರಿದ್ದರು.
ನಗರದ ಹಾಗೂ ಗ್ರಾಮಾಂತರ ಭಾಗದ ಕೆಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಕೆಜೆಪಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಬಿ.ಪಿ. ಹರೀಶ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಕೆಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಗೆಲುವಿಗೆ ಕಾರಣವಾಗಲಿದೆ ಎಂದರು.
ಹರೀಶ್ ಅವರ ಆಸ್ತಿ ವಿವರ
2012-13ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಆದಾಯದ ವಿವರ: 7,34,690.
ಕೈಯಲ್ಲಿರುವ ನಗದು ರೂ. 16,08,009.
ಕೃಷಿ ಭೂಮಿ: ದಾವಣಗೆರೆ ತಾಲೂಕು ಬೆಳವನೂರು ಗ್ರಾಮದಲ್ಲಿ 4ಎಕರೆ 15 ಗುಂಟೆ ಮತ್ತು 2 ಎಕರೆ 30 ಗುಂಟೆ.
ನಿವೇಶನಗಳು: 5, ದಾವಣಗೆರೆ ಪಿ.ಜೆ. ಬಡಾವಣೆಯಲ್ಲಿ ಸ್ವಂತ ಮನೆ.
ಒಟ್ಟು ಸಾಲ: ರೂ. 67,22,677.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.