ADVERTISEMENT

ಮೀನು ಮರಿ ಮಾರಾಟದ ಯಶೋಗಾಥೆ

ಹರಪನಹಳ್ಳಿ: ಎರಡು ದಶಕಗಳಿಂದ ಮೀನು ಕೃಷಿಯಲ್ಲಿ ತೊಡಗಿರುವ ಯುವಕರು

ಮಲ್ಲಿಕಾರ್ಜುನ ಕನ್ನಿಹಳ್ಳಿ
Published 10 ಜುಲೈ 2017, 5:07 IST
Last Updated 10 ಜುಲೈ 2017, 5:07 IST
ಮೀನು ಮರಿ ಮಾರಾಟದ ಯಶೋಗಾಥೆ
ಮೀನು ಮರಿ ಮಾರಾಟದ ಯಶೋಗಾಥೆ   

ಹರಪನಹಳ್ಳಿ:  ಆರು ಎಕರೆ ಜೌಗು(ಸವುಳು) ಭೂಮಿಯಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ನಷ್ಟ ಅನುಭವಿಸಿ ಕೊನೆಗೆ ಹೊಂಡಗಳನ್ನು ನಿರ್ಮಿಸಿ, ಮೀನುಕೃಷಿಯಲ್ಲಿಯೇ ಯುವಕರು ಯಶ ಕಂಡಿದ್ದಾರೆ.

ತಾಲ್ಲೂಕಿನ ಮಾದಾಪುರ ಗ್ರಾಮದ ಬಳಿ ಆರು ಎಕರೆ ಪ್ರದೇಶದಲ್ಲಿ ಪವಾಡಿ ಕುಟುಂಬ 24 ಹೊಂಡಗಳನ್ನು ನಿರ್ಮಿಸಿದೆ. ದೇವೇಂದ್ರ, ಆಂಜಿನಪ್ಪ, ಭರತ್‌ ಮತ್ತು ರವಿಕುಮಾರ್‌ ಎಂಬ ಯುವಕರು ಎರಡು ದಶಕಗಳಿಂದ  ಮೀನು ಮರಿಗಳ ಕೃಷಿ ಮಾಡಿಕೊಂಡು ಬಂದಿದ್ದಾರೆ.     

‘ದೇವೇಂದ್ರ ಮೀನು ಮರಿ ಮಾರಾಟ ಕೇಂದ್ರ’ ಎಂಬ ಖಾಸಗಿ ಸಂಸ್ಥೆ ಯನ್ನು ಯುವಕರು ಸ್ಥಾಪಿಸಿದ್ದಾರೆ. ಹಾವೇರಿ, ಹಾನಗಲ್‌, ಮುಂಡಗೋಡು, ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರೂ, ಗಂಗಾವತಿ, ಹರಪನಹಳ್ಳಿ ತಾಲ್ಲೂಕುಗಳಿಂದ ಮೀನು ಮರಿಗಳ ಖರೀದಿಗೆ ಬರುತ್ತಾರೆ.

ADVERTISEMENT

ಮೀನು ಮರಿ ಉತ್ಪಾದನಾ ಕೇಂದ್ರಗಳಾದ ಬಿ.ಆರ್‌.ಪ್ರಾಜೆಕ್ಟ್‌ ಶಿವಮೊಗ್ಗ,  ಹೊಸಪೇಟೆ  ಟಿ.ಬಿ.ಡ್ಯಾಂ ನಿಂದ ಮೊಟ್ಟೆಗಳನ್ನು ಖರೀದಿಸುತ್ತಾರೆ. ನಂತರ ಹೊಂಡಗಳಲ್ಲಿ ಮರಿ ಮಾಡಿ  ಬೆಳೆಸಿ ಮಾರಾಟ ಮಾಡುತ್ತಾರೆ.

ಮೂರು ಲಕ್ಷ ಲಾಭ:  ಪ್ರತಿ ವರ್ಷ 1.5 ಕೋಟಿಗೂ ಹೆಚ್ಚು ಮೊಟ್ಟೆಗಳನ್ನು ಖರೀದಿಸುತ್ತಾರೆ. ಈ ಭಾಗದಲ್ಲಿ ಕಾರ್ಪ್‌, ಕಟ್ಲಾ, ರೋವು, ಮೃಗಾಲ್‌, ಹುಲ್ಲುಗಂಡೆ ಮುಂತಾದ ಜಾತಿ ಮರಿಗಳಿಗೆ ಬೇಡಿಕೆ ಇದೆ. ಚಿನ್ನುಕುಮಾರ್‌ ಮತ್ತು ಶಂಕರಗೌಡ ಎಂಬವರು ರಾತ್ರಿ ಸಮಯದಲ್ಲಿ ಕಾವಲಿರುತ್ತಾರೆ. ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು, ಆರು ತಿಂಗಳಲ್ಲಿ ಕನಿಷ್ಠ ₹ 3 ಲಕ್ಷ ಆದಾಯ ಗಳಿಸುತ್ತಾರೆ.

‘ಎರಡು ಕೊಳವೆಬಾವಿಗಳಿಂದ ಹೊಂಡಗಳಲ್ಲಿ ನೀರು ಸಂಗ್ರಹಿಸಿದ್ದು, ಸುಮಾರು 50 ಲಕ್ಷಕ್ಕೂ ಹೆಚ್ಚು ಮರಿಗಳನ್ನು ಸಾಕಿದ್ದೇವೆ. ಉತ್ತಮ ಮಳೆಯಾಗಿ ಕೆರೆಗಳು ತುಂಬಿದಲ್ಲಿ ಮೀನು ಸಾಕಣೆದಾರರಿಂದ ಹೆಚ್ಚು ಬೇಡಿಕೆ ಬರಲಿದೆ.  ಆದಾಯವೂ ಹೆಚ್ಚಾಗಲಿದೆ. ಬರಗಾಲದಿಂದ   ಕೆರೆಗಳಲ್ಲಿ ನೀರಿಲ್ಲ. ಈ ವರ್ಷ ಮೀನು ಮರಿಗಳ ಬೇಡಿಕೆ ಕುಸಿದಿದೆ’ ಎನ್ನುತ್ತಾರೆ ಭರತ್‌

ಹಾನಗಲ್ ತಾಲ್ಲೂಕಿನ ಹೊಂಕಣ ಎಂಬಲ್ಲಿ ಸಹೋದರ ಮಲ್ಲಿಕಾರ್ಜುನ ‘ದುರ್ಗಾ ಮೀನು ಮರಿ ಕೇಂದ್ರ’ ಸ್ಥಾಪಿಸಲಾಗಿದೆ.  ಇದು ಉತ್ತಮ ಲಾಭದಲ್ಲಿದೆ ಎಂದು ಪವಾಡಿ ದೇವೇಂದ್ರ ಮತ್ತು ಭರತ್‌ ಮಾಹಿತಿ ನೀಡಿದರು.

ದುರ್ಗಾ ಅಕ್ವೇರಿಯಂ:  ಮೀನು ಮರಿಗಳ ಮಾರಾಟ ಮುಗಿದ ನಂತರ ಸಂಜೆ ಬಿಡುವಿನ ವೇಳೆ ಅಲಂಕಾರಿಕ ಮೀನುಗಳ ಮಾರಾಟ ಮಾಡಲಾಗುತ್ತದೆ. ಪಟ್ಟಣದಲ್ಲಿ ಮಾರಾಟ ಕೇಂದ್ರ ಆರಂಭಿಸಿದ್ದು, ಅದು ಯಶಸ್ವಿಯಾಗಿ ನಡೆಯುತ್ತಿದೆ.

ಸಾವಿರ ಕಾಟ್ಲ ಮೀನು ಮರಿಗಳಿಗೆ  ₹250 ಹಾಗೂ ಗ್ಲಾಸ್‌ ಕಾರ್ಪ್‌ ಮೀನಿಗೆ ₹ 400ಗೆ  ಮಾರಾಟ ಮಾಡಲಾಗುತ್ತದೆ.  ಜಮೀನಿನಲ್ಲಿ ಎರಡು ಕೊಳವೆಬಾವಿಗ ಳಿರುವುದಿಂದ ನೀರು ಪೂರೈಕೆಗೆ ಯಾವುದೇ ತೊಂದರೆಯಾಗಿಲ್ಲ. ಎನ್ನುತ್ತಾರೆ  ದೇವೇಂದ್ರ. ಹೆಚ್ಚಿನ ಮಾಹಿತಿಗೆ 9986122770, 9900550025 ಸಂಪರ್ಕಿಸಬಹುದು.

***

ಈಗೀಗ ಮೀನು ಕೃಷಿ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಕಾಟ್ಲ ಹಾಗೂ ಗೌರಿ ಮೀನು ಮರಿಗಳಿಗೆ ಹೆಚ್ಚಿನ ಬೇಡಿಕೆ ಇದೆ
ಪವಡಿ ದೇವೇಂದ್ರ, ಮೀನು ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.