ADVERTISEMENT

ಮುಚ್ಚಿದ ಪೆಟ್ರೋಲ್ ಬಂಕ್: ಪರದಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:10 IST
Last Updated 3 ಫೆಬ್ರುವರಿ 2011, 6:10 IST

ನ್ಯಾಮತಿ: ಪಟ್ಟಣದ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಸಂಬಂಧಿಸಿದ ಪೆಟ್ರೊಲ್-ಡೀಸೆಲ್ ಬಂಕ್ ಕೆಲವು ದಿನಗಳಿಂದ ಮುಚ್ಚಿರುವ ಹಿನ್ನೆಲೆಯಲ್ಲಿ ಗ್ರಾಹಕರು ವಾಹನಗಳಿಗೆ ಇಂಧನ ಇಲ್ಲದೆ ಪರದಾಡುವಂತಾಗಿದೆ.

ಪ್ರತಿನಿತ್ಯ ಹಲವಾರು ವಾಹನಗಳು ಈ ಬಂಕ್‌ನ ಸೌಲಭ್ಯವನ್ನು ಪಡೆಯುತ್ತಿದ್ದವು, ಆದರೆ ಕಳೆದ ಒಂದು ತಿಂಗಳಿಂದ ಈ ಬಂಕ್ ಮುಚ್ಚಿರುವುದರಿಂದ ಈ ಭಾಗದ ವಿವಿಧ ವಾಹನಗಳ ಮಾಲೀಕರು ಇಂಧನವನ್ನು ಹೊನ್ನಾಳಿ-ಶಿವಮೊಗ್ಗಕ್ಕೆ ಹೋಗಿ ತುಂಬಿಸಬೇಕಿದೆ. ರೈತರು ತಮ್ಮ ಹೊಲ-ಗದ್ದೆಗಳಿಗೆ ಟ್ರ್ಯಾಕ್ಟರ್ ಮೂಲಕ ಸಾಗುವಳಿ ಮಾಡಲು ಹಿನ್ನಡೆಯಾಗಿದೆ ಎಂದು ಸುರಹೊನ್ನೆಯ ಬಾವಿಮನೆ ರಾಜಶೇಖರ ಮತ್ತಿತರರು ತಮ್ಮ ಅಳಲನ್ನು ‘ಪ್ರಜಾವಾಣಿ’ ಗೆ ತಿಳಿಸಿದರು.

ಪಟ್ಟಣದಲ್ಲಿ ಅನಧಿಕೃತವಾಗಿ ಇಂಧನ ಮಾರಾಟ ಮಾಡುವವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಾಹನ ಮಾಲೀಕರಾದ ಸುಭಾಷ್, ಮಲ್ಲಿಕಾರ್ಜುನ, ದೇವರಾಜ್ ಸಿಂಗ್, ಆಟೊ ಚಾಲಕ ರವಿ, ಗ್ರಾ.ಪಂ. ಸದಸ್ಯ ಎ. ವೀರಭದ್ರಪ್ಪ, ಶಬ್ಬೀರ್ ಇತರರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.