ಹರಿಹರ: ನಗರದ ಪ್ರಸ್ತುತ ವರ್ಷದ ಆರೋಗ್ಯಮಾತೆ ಜಾತ್ರೆ `ಮೇರಿ ಮಾತೆ ಕುಟುಂಬದ ರಾಣಿ~ ಎಂಬ ಧ್ಯೇಯ ವಾಕ್ಯದೊಂದಿಗೆ ವಿಜೃಂಭಣೆಯಿಂದ ಗುರುವಾರ ನಡೆಯಿತು.
ಕಳೆದ ಒಂಬತ್ತು ದಿನಗಳ ಹಿಂದೆ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು. ನಿತ್ಯ ಪುಷ್ಪಾರ್ಪಣೆ, ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಪ್ರಬೋಧನೆಗಳು ಜರುಗಿದವು. ಮಹೋತ್ಸವದ ಹತ್ತನೇ ದಿನವಾದ ಬುಧವಾರ ಬೆಳಗಿನ ಜಾವ 5.30ರಿಂದಲೇ ವಿವಿಧ ಭಾಷೆಗಳಲ್ಲಿ ಪವಿತ್ರ ಬಲಿ ಪೂಜೆ ನಡೆಯಿತು. ಭದ್ರಾವತಿಯ ಪಾದ್ರಿ ಡಾ.ಜೋಸೆಫ್ ಅರುಮಚಡತ್, ಬೆಂಗಳೂರಿನ ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಡಾ.ಇಗ್ನೇಷಿಯಸ್ ಪಿಂಟೋ, ಆರೋಗ್ಯಮಾತೆ ಚರ್ಚ್ನ ಪಾದ್ರಿಸ್ಟ್ಯಾನಿ ಡಿ~ ಸೋಜಾ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಕೆಲವು ಭಕ್ತರು ಕೇಶಮುಂಡನ, ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಚರ್ಚ್ನವರೆಗೆ ದೀಡು ನಮಸ್ಕಾರ ಹಾಗೂ ಮೊಣಕಾಲ ಮೇಲೆ ನಡೆದು ಬರುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಮಾತೆಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತರು ಮೇಣದ ಬತ್ತಿ, ಸೇವಂತಿಗೆ ಹೂಗಳನ್ನು ಅರ್ಪಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಸಂಜೆ, ಸೇವಂತಿಗೆ ಹೂಗಳಿಂದ ಶೃಂಗರಿಸಿದ ತೇರಿನಲ್ಲಿ ಆರೋಗ್ಯಮಾತೆಯ ವಿಗ್ರಹ ಮೆರವಣಿಗೆ ಚರ್ಚ್ನ ಆವರಣದಿಂದ ಆರಂಭವಾಯಿತು.
ಮೆರವಣಿಗೆಗೆ ಮಳೆ ಸಾಥ್ ನೀಡಿತು. ಸುರಿವ ಮಳೆಯನ್ನೂ ಲೆಕ್ಕಿಸದೇ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಕುರುಬರ ಬೀದಿ, ಪ್ರವಾಸಿ ಮಂದಿರ ರಸ್ತೆ, ಶಿಬಾರ ವೃತ್ತ, ಹಳೆಯ ಚರ್ಚ್, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯ ಮೂಲಕ ಪುನಃ ಚರ್ಚ್ ಆವರಣವನ್ನು ತಲುಪಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಒಂದು ಡಿಎಆರ್ ತುಕಡಿ, 7 ಪಿಎಸ್ಐ, 19 ಎಎಸ್ಐ, 142 ಪೊಲೀಸ್ ಸಿಬ್ಬಂದಿ ಹಾಗೂ 30 ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸಿ ಭದ್ರತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.