ಹರಿಹರ: ಟಿವಿ ಧಾರವಾಹಿಗಳ ಭರಾಟೆಯಲ್ಲಿ ಸಾರ್ವಜನಿಕರಿಗೆ ನಾಟಕ ನೋಡುವ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ರಾಣಿ ಚೆನ್ನಮ್ಮ ಸ್ವಸಹಾಯ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಧಾರವಾಡದ ಆಟ-ಮಾಟ ಸಾಂಸ್ಕೃತಿಕ ಪಥ ಸಂಚಾರಿ ನಾಟಕ ತಂಡದ ಶ್ರೀಕೃಷ್ಣ ಸಂಧಾನ ಎಂಬ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಭೂಮಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಾಟಕಗಳಲ್ಲಿ ಜೀವಂತಿಕೆ ಇರುತ್ತದೆ. ರಂಗಭೂಮಿ ಕಲಾವಿದರ ಜೀವನ ಕಷ್ಟದಾಯಕವಾಗಿದೆ. ಸರ್ಕಾರ ಹಲವಾರು ಯೋಜನೆಗಳ ಮೂಲಕ ರಂಗಭೂಮಿ ಕಲಾವಿದರಿಗೆ ಅನುದಾನ ನೀಡುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ವಿಶ್ವನಾಥ ಭೂತೆ ಮಾತನಾಡಿ, ನಗರದಲ್ಲಿ ನಾಟಕ ಪ್ರೇಮಿಗಳಿದ್ದಾರೆ. ಪ್ರಚಾರದ ಕೊರತೆಯ ಕಾರಣ, ಜನರಿಗೆ ನಾಟಕ ನಡೆಯುವ ಬಗ್ಗೆ ಅವರಿಗೆ ತಿಳಿಯದಿರಬಹುದು. ಮಹಿಳಾ ಸಂಘದವರು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನಾರ್ಹ ಸಂಗತಿ. ಇಂಥ ಕಾರ್ಯಕ್ರಮಗಳು ಭವನದಲ್ಲಿ ನಡೆಸುವುದಕ್ಕಿಂತ ವಸತಿ ಪ್ರದೇಶಗಳ ಬಯಲು ರಂಗಮಂದಿರಗಳಲ್ಲಿ ನಡೆಸಿದರೆ ಹೆಚ್ಚು ಜನರಿಗೆ ನಾಟಕ ಸವಿಯುವ ಅವಕಾಶ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷೆ ಎಸ್.ಆರ್. ಅಂಜು ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಎಚ್.ಎಂ. ಕೊಟ್ರೇಶ್, ನಗರಸಭೆ ಸದಸ್ಯ ರಮೇಶ್ ಮೆಹರ್ವಾಡೆ, ಪತ್ರಕರ್ತ ಎಚ್.ಕೆ. ಕೊಟ್ರಪ್ಪ, ಪಿಎಸ್ಐ ಎಂ.ಎನ್. ಪೂಣಚ್ಚ, ನಾಟಕ ತಂಡ ಮುಖ್ಯಸ್ಥ ಧನಂಜಯ ಪಾವಗಡ ಉಪಸ್ಥಿತರಿದ್ದರು.
ಬಿ.ಎಸ್. ಕವಿತಾ ಪ್ರಾರ್ಥಿಸಿದರು. ಪಿ. ಪುಟ್ಟಮ್ಮ ಸ್ವಾಗತಿಸಿದರು. ಜಿ.ಎಸ್. ಸಂಗೀತಾ ವಂದಿಸಿದರು. ಬಿ.ಎಂ. ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.