ADVERTISEMENT

ವಂಚನೆ; ಅಂಗಡಿ ಮಾಲೀಕ ಪರಾರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 6:45 IST
Last Updated 13 ಜನವರಿ 2011, 6:45 IST

ದಾವಣಗೆರೆ: ಆಭರಣ ತಯಾರಿಕೆ ಅಂಗಡಿ ಮಾಲೀಕನೊಬ್ಬ ಚಿನ್ನಾಭರಣ ಸಹಿತ ಕೋಟ್ಯಂತರ ರೂ ವಂಚಿಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.ನಗರದ ಮಂಡಿಪೇಟೆಯ ಕಾರ್ತಿಕ್ ಜುವೆಲರ್ಸ್ ಮಾಲೀಕ, ಮೂಲತಃ ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿಯ ಮಂಜುನಾಥ್ ವಂಚನೆ ನಡೆಸಿದ್ದಾನೆ ಎಂದು ಆಭರಣ ಕಳೆದುಕೊಂಡವರು ದೂರು ನೀಡಿದ್ದಾರೆ.

ನಗರದ ವಿವಿಧ ಆಭರಣ ಅಂಗಡಿಯವರು ಚಿನ್ನ, ಬೆಳ್ಳಿ ನೀಡಿದ್ದರು. ವಿಶ್ವನಾಥ ರಾಯ್ಕರ್ ಎಂಬುವರು 1 ಕೆಜಿ ಚಿನ್ನವನ್ನು ಆಭರಣ ತಯಾರಿಕೆಗಾಗಿ ನೀಡಿದ್ದರು.ಚಿತ್ರದುರ್ಗ ಜಿಲ್ಲೆಯ ಹಳೆರಂಗಾಪುರದ ರಮೇಶ್ ಎಂಬುವರು ತಮ್ಮ ಸಹೋದರಿಯ ಮದುವೆಗಾಗಿ ್ಙ 1.20 ಲಕ್ಷ ಮೌಲ್ಯದ ಆಭರಣ ತಯಾರಿಕೆಗೆ ನಗದು ನೀಡಿದ್ದರು. ಎರಡು ದಿನಗಳ ಹಿಂದೆ ಅವರು ಮಂಜುನಾಥ್ ಮೇಲೆ ಶಂಕೆಗೊಂಡು ಆತನನ್ನು ಪತ್ತೆಹಚ್ಚಿ ಆಭರಣ ತಯಾರಿಸುವ ಬಗ್ಗೆ ಖಾತ್ರಿಪಡಿಸಿಕೊಂಡಿದ್ದರು. ಆ ಬಳಿಕ ಆತ ಪರಾರಿಯಾಗಿದ್ದಾನೆ. ಅಂಗಡಿ ಖಾಲಿ ಮಾಡಿದ್ದು, ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿದ್ದ ತನ್ನ ಮನೆಯನ್ನೂ ಮಾರಾಟ ಮಾಡಿದ್ದಾನೆ. ಸುಮಾರು ್ಙ 3 ಕೋಟಿಯಷ್ಟು ಆಭರಣ ವಂಚನೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬುಧವಾರ ಮಳಿಗೆ ಮುಂದೆ ವಂಚನೆಗೊಳಗಾದವರು ಜಮಾಯಿಸಿ ಗೋಳಾಡಿದರು.

ಮಾನವೀಯತೆ: ರಮೇಶ್ ಅವರ ಸಹೋದರಿಯ ಮದುವೆ ಜ. 15ರಂದು ನಿಗದಿಯಾಗಿದೆ. ಆಭರಣ ವಂಚನೆ ನಡೆದ ಹಿನ್ನೆಲೆಯಲ್ಲಿ ಮದುವೆ ನಿಲ್ಲಬಾರದು ಎಂದು ಅಲ್ಲಿ ಸೇರಿದ್ದ ವಂಚನೆಗೊಳಗಾದ ಇತರ ಗ್ರಾಹಕರು ಸೇರಿ ಹಣ ಸಂಗ್ರಹಿಸಿ ಆಭರಣ ಖರೀದಿಸಲು ನೆರವಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.