ADVERTISEMENT

ವಿನೋಬ ನಗರದಲ್ಲಿ ನೆಮ್ಮದಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 8:10 IST
Last Updated 1 ಜುಲೈ 2012, 8:10 IST
ವಿನೋಬ ನಗರದಲ್ಲಿ ನೆಮ್ಮದಿ ಕೇಂದ್ರ
ವಿನೋಬ ನಗರದಲ್ಲಿ ನೆಮ್ಮದಿ ಕೇಂದ್ರ   

ದಾವಣಗೆರೆ: ಇಲ್ಲಿನ ವಾರ್ಡ್ ನಂ. 20ರ ವಿನೋಬ ನಗರದಲ್ಲಿ ನೂತನವಾಗಿ ತೆರೆದಿರುವ ನೆಮ್ಮದಿ ಕೇಂದ್ರ ಶನಿವಾರ ಕಾರ್ಯಾರಂಭ ಮಾಡಿದೆ.

ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮೊದಲಾದ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಪಾಲಿಕೆ ಆವರಣದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು.

ಇದರಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು, ವಿನೋಬ ನಗರದಲ್ಲಿ ನೆಮ್ಮದಿ ಕೇಂದ್ರ ತೆರೆಯುವಂತೆ ಪಾಲಿಕೆ ಸದಸ್ಯೆ ರೇಖಾ ನಾಗರಾಜ್, ಪಾಲಿಕೆ ವಿರೋಧಪಕ್ಷದ ನಾಯಕ ಡಿ.ಎನ್. ಜಗದೀಶ್, ಪಾಲಿಕೆ ಸದಸ್ಯರಾದ ಶಿವನಹಳ್ಳಿ ರಮೇಶ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ಹಾಗೂ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ, ನೆಮ್ಮದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದು ಸ್ಥಳೀಯರ ಅಭಿನಂದನೆಗೆ ಪಾತ್ರವಾಗಿದೆ.

   ಉದ್ಘಾಟನೆ
ಕೇಂದ್ರವನ್ನು ಪಾಲಿಕೆ ಸದಸ್ಯೆ ರೇಖಾ ನಾಗರಾಜ್ ಉದ್ಘಾಟಿಸಿದರು. ದಿನೇಶ್ ಕೆ. ಶೆಟ್ಟಿ, ಲಯನ್ಸ್‌ನ ಲತಿಕಾ ದಿನೇಶ್ ಶೆಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷ  ಎ. ನಾಗರಾಜ್, ಅಡಾಣಿ ಕರಿಬಸಪ್ಪ, ಮುಖಂಡರಾದ ಕೊಂಡಜ್ಜಿ ಹನುಮಂತಪ್ಪ, ಎಚ್. ಸುರೇಶ್, ಕಾಳಿಂಗರಾಜು, ರಾಮಚಂದ್ರ ರಾಯ್ಕರ್, ರುದ್ರೇಶ್, ನೆಮ್ಮದಿ ಕೇಂದ್ರದ ಉಮೇಶ್, ಲಿಂಗರಾಜ್, ಮೆಹಬೂಬ್ ಪಾಷಾ, ಅಂಗನವಾಡಿ ಕೇಂದ್ರದ ರೇಣುಕಮ್ಮ ಪಾಲ್ಗೊಂಡಿದ್ದರು.

 ಉತ್ತಮ ಪ್ರತಿಕ್ರಿಯೆ
ನೂತನ ನೆಮ್ಮದಿ ಕೇಂದ್ರದಿಂದ ವಿನೋಬ ನಗರ, ವಿನಾಯಕ ನಗರ, ಯಲ್ಲಮ್ಮ ನಗರ, ಶಾಂತಿ ನಗರದ ನಿವಾಸಿಗಳಿಗೆ ಅನುಕೂಲ ಆಗಿದೆ. ಇದರಿಂದ ಪಾಲಿಕೆ ಆವರಣದ ಕೇಂದ್ರದಲ್ಲಿ ಕೊಂಚ ಮಟ್ಟಿಗೆ ಒತ್ತಡ ಕಡಿಮೆಯಾಗಿದೆ.

ಕೇಂದ್ರದಲ್ಲಿ ಮೊದಲ ದಿನವೇ, ವಿವಿಧ ಪ್ರಮಾಣಪತ್ರಗಳು ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯಲು 350ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಅಲ್ಲದೇ, ಪಾಲಿಕೆ ಕೇಂದ್ರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 40 ಅರ್ಜಿಗಳನ್ನು (ಈ ಭಾಗಕ್ಕೆ ಸೇರಿದ) ವಿಲೇವಾರಿ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.