ಹೊನ್ನಾಳಿ: ತಾಲ್ಲೂಕಿನ ವಿವಿಧೆಡೆ ಕಂದಾಯ, ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಗಳ ವತಿಯಿಂದ ದಾಳಿ ನಡೆಸಿ 205 ಘನ ಮೀಟರ್ ಮರಳನ್ನು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಶನಿವಾರ ವಶಪಡಿಸಿಕೊಂಡು, ರೂ. 1,64,000 ದಂಡ ವಿಧಿಸಿದ್ದಾರೆ.
ತಾಲ್ಲೂಕಿನ ಹಳೇಮಳಲಿ, ಬಾಗೇವಾಡಿ, ಬುಳ್ಳಾಪುರ, ರಾಂಪುರ ಮತ್ತು ಹಿರೇಬಾಸೂರು ಗ್ರಾಮಗಳ ವಿವಿಧ ಕ್ವಾರಿಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಮರಳು ವಶಪಡಿಸಿಕೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆ ನೀಡುವ ಪರವಾನಗಿ ಪತ್ರಗಳನ್ನು ಹಾಜರುಪಡಿಸಿ ಮರಳು ತೆಗೆದುಕೊಳ್ಳಲು ಬರುವವರಿಗೆ ವಿಶೇಷವಾಗಿ ತಾಲ್ಲೂಕಿನ ಈ ಐದು ಗ್ರಾಮಗಳಲ್ಲಿ ಸಾರ್ವಜನಿಕರು ಅಡ್ಡಿಪಡಿಸುವ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಮಾಹಿತಿ ಲಭಿಸಿದೆ. ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಹಾಗಾಗಿ ಯಾರೂ ಇಂತಹ ಕೃತ್ಯದಲ್ಲಿ ತೊಡಗಬಾರದು. ಒಂದು ವೇಳೆ ಇಂತಹ ಕೃತ್ಯ ನಡೆಸುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಎಚ್ಚರಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಇಇ ಹನುಮಂತಪ್ಪ ರೆಡ್ಡಿ, ಕಂದಾಯ ಇಲಾಖೆಯ ನ್ಯಾಮತಿ ನಾಗರಾಜ್, ಪಿಎಸ್ಐ ಸಿದ್ಧಾರೂಢ ಬಡಿಗೇರ, ಎಚ್.ಬಿ. ಪ್ರಕಾಶ್, ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.