ADVERTISEMENT

ಸರ್ಕಾರಕ್ಕೆ ‘ಹೊನ್ನಾಳಿ ಹೊಡೆತ: ಎಂಪಿಆರ್‌

ಬೇಡಿಕೆ ಈಡೇರಿಸದಿದ್ದಲ್ಲಿ ಸುವರ್ಣಸೌಧದೆದುರು ತೀವ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 9:15 IST
Last Updated 6 ಡಿಸೆಂಬರ್ 2013, 9:15 IST

ದಾವಣಗೆರೆ: ರೈತರು ಬೆಳೆದ ಇತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರೈತರು ಬೆಳಗಾವಿಯ ಸುವರ್ಣ ಸೌಧದ ಎದುರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆದರು.

ಭತ್ತಕ್ಕೆ ಕ್ವಿಂಟಲ್‌ಗೆರೂ 2,300, ಮೆಕ್ಕೆಜೋಳಕ್ಕೆರೂ 1,800 ಹಾಗೂ ಹತ್ತಿಗೆರೂ 6 ಸಾವಿರ ನಿಗದಿಪಡಿಸಬೇಕು. ಅನ್ನಭಾಗ್ಯ ಯೋಜನೆಯನ್ನು ಎಪಿಎಲ್‌ಗೆ ಪಡಿತರ ಚೀಟಿದಾರರಿಗೂ ವಿಸ್ತರಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್‌ ಪೂರೈಸಬೇಕು ಎಂದು ಒತ್ತಾಯಿಸಿದರು.

25ಕ್ಕೂ ಹೆಚ್ಚು ಬಸ್‌ಗಳಲ್ಲಿ ಹೊನ್ನಾಳಿಯಿಂದ ತೆರಳಿದ್ದ ರೈತರು, ಬೇಡಿಕೆ ಈಡೇರಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರೇಣುಕಾಚಾರ್ಯ ಮಾತನಾಡಿ, ‘ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ಆಡಳಿತ ನಡೆಸಿತ್ತು. ರೈತರ ಸಂಕಷ್ಟಗಳಿಗೆ ಕೂಡಲೇ ಸ್ಪಂದಿಸಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಬರ, ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಸರ್ಕಾರಕ್ಕೆ ಬುದ್ಧಿ ಕಲಿಸಲು ಅನಿವಾರ್ಯವಾಗಿ ಬೀದಿಗಿಳಿದಿದ್ದೇವೆ’ ಎಂದು ತಿಳಿಸಿದರು.

ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದರು.

ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ಮಾತನಾಡಿ, ‘ರೈತ ವಿರೋಧಿಯಾಗಿರುವ ಈ ಸರ್ಕಾರಕ್ಕೆ ನಮ್ಮ ಕೂಗು ಕೇಳುತ್ತಿಲ್ಲ ಎಂದು ಅಸಮಾಧಾನ ಸೂಚಿಸಿದರು.

ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹೊನ್ನಾಳಿ ಎಪಿಎಂಸಿ ಅಧ್ಯಕ್ಷ ಧರ್ಮಪ್ಪ, ಉಪಾಧ್ಯಕ್ಷ ಕೋಮೇಶಪ್ಪ, ಹೊನ್ನಾಳಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಹೊಸಕೆರೆ ಸುರೇಶ್‌, ಚಂದ್ರಶೇಖರ ಪಾಟೀಲ್‌, ಪೇಟೆ ಪ್ರಶಾಂತ, ಸರಳಿನ ಮನೆ ಮಂಜು, ಇರ್ಷಾದ್‌ ಬೇಗಂ, ತಾ.ಪಂ. ಸದಸ್ಯರಾದ ಜವಳಿ ಸುರೇಶ್‌, ಕೆಂಚಿಕೊಪ್ಪ ರುದ್ರೇಶ್‌, ಮಾದನಬಾವಿ ಆನಂದಪ್ಪ, ತಾಲ್ಲೂಕು ಕೆಜೆಪಿ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.