ADVERTISEMENT

ಸಾಲ ಮಂಜೂರಾತಿಗೆ ವಿಳಂಬ ಬೇಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 10:15 IST
Last Updated 20 ಸೆಪ್ಟೆಂಬರ್ 2011, 10:15 IST

ದಾವಣಗೆರೆ: ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡುವ ವಿಚಾರದಲ್ಲಿ ಜಿಲ್ಲೆಯ ಬ್ಯಾಂಕುಗಳು ವಿಳಂಬ ಮಾಡಬಾರದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ್ ಸೂಚಿಸಿದರು.

ಜಿ.ಪಂ. ಸಭಾಂಗಣದಲ್ಲಿ ಸೋಮವಾರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಮ್ಮಿಕೊಂಡಿದ್ದ ಬ್ಯಾಂಕುಗಳ ವ್ಯವಹಾರದ ಜಿಲ್ಲಾಮಟ್ಟದ ಪುನರಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.ಶಿಕ್ಷಣ, ಕೃಷಿ, ವಸತಿ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಬಂದಾಗ ಬ್ಯಾಂಕ್ ಅಧಿಕಾರಿಗಳು ಸಹಕರಿಸಬೇಕು. ಇತರ ಯಾವುದೇ ನೆಪ ಹೇಳದೇ ಆದ್ಯತೆ ನೀಡಬೇಕು.

ಫಲಾನುಭವಿಗಳಿಗೆ ತೊಂದರೆಯಾಗದಂತೆ ಶೀಘ್ರವಾಗಿ ಸಾಲ ಮಂಜೂರಾತಿ ಮಾಡಬೇಕು. ಯಾವುದೇ ಷರತ್ತುಗಳನ್ನು ವಿಧಿಸಬಾರದು. ಜನರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ವೇತನ ಪಡೆಯುವುದಕ್ಕಾಗಿ ಬ್ಯಾಂಕ್ ಖಾತೆ ಮಾಡಿಸಲು ಬರುವ ಫಲಾನುಭವಿಗಳಿಗೆ ಕೆಲವು ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

`ವಾಜಪೇಯಿ ವಸತಿ ಯೋಜನೆ~ಯ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವ ವಿಚಾರದಲ್ಲಿ ವಿಳಂಬ ಆಗುತ್ತಿರುವ ಬಗ್ಗೆಯೂ ದೂರು ಕೇಳಿ ಬಂತು. ಆಗ ಗುತ್ತಿ ಜಂಬುನಾಥ್ ಮಾತನಾಡಿ, ಇದೊಂದು ಮಹತ್ವದ ಯೋಜನೆಯಾಗಿದೆ. ಇಂಥ ವಿಚಾರಗಳಲ್ಲಿ ಬ್ಯಾಂಕಿನವರು ವಿಳಂಬ ಮಾಡಬಾರದು. ಈ ತಿಂಗಳೊಳಗೆ ಯೋಜನೆಯ ಸಾಲ ಮಂಜೂರಾತಿ ಮಾಡಬೇಕು ಎಂದು ತಾಕೀತು ಮಾಡಿದರು.

ವಿಶೇಷವಾಗಿ ಆಕ್ಸಿಸ್ ಬ್ಯಾಂಕ್‌ನಂಥ ಖಾಸಗಿ ವಲಯದ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು. ಸಾಲ ಮಂಜೂರಾತಿಗೆ ಸಂಬಂಧಿಸಿದಂತೆ, ಆಕ್ಸಿಸ್ ಬ್ಯಾಂಕ್‌ನವರು ಪ್ರಧಾನ ಕಚೇರಿಯಿಂದ ಒಪ್ಪಿಗೆ ಪಡೆಯಲು ಮೂರು ತಿಂಗಳು ವಿಳಂಬ ಮಾಡಿರುವ ಬಗ್ಗೆ ಆ ಬ್ಯಾಂಕಿನ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಬ್ಯಾಂಕುಗಳು ಸಾಲ ಮರುಪಾವತಿ ಬಗ್ಗೆ ಚಿಂತೆ ಮಾಡದೇ ಸಾಲ ನೀಡುವುದಕ್ಕೆ ಆದ್ಯತೆ ಕೊಡುವಂತೆ ಸೂಚಿಸಲಾಯಿತು.

`ನಬಾರ್ಡ್~ನ ಹಿರಿಯ ಅಧಿಕಾರಿ ಬಿ. ಕಲ್ಯಾಣರಾಮನ್ ಮಾತನಾಡಿ, ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ಯೋಜನೆಗಳಿಗೆ ಸಾಲ ಮಂಜೂರಾತಿಯ ಅರ್ಜಿಗಳನ್ನು ಬ್ಯಾಂಕಿನವರು ಫಲಾನುಭವಿಗಳಿಂದ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

ಕೆನರಾ ಬ್ಯಾಂಕ್ ಹುಬ್ಬಳ್ಳಿ ವೃತ್ತದ ಸಹಾಯಕ ಜನರಲ್ ಮ್ಯಾನೇಜರ್ ಎ.ಆರ್. ಮೊಕಾಶಿ, ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಹಸನ್ ತಾಹೀರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ. ಮಲ್ಲಿಕಾರ್ಜುನಪ್ಪ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.