ADVERTISEMENT

ಸೀತಮ್ಮ ಬಾಲಕಿಯರ ಪಿಯು ಕಾಲೇಜಿನ ಪ್ರತಿಭಾ ವಿಕಾಸ ಸಂಘದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 5:10 IST
Last Updated 19 ಫೆಬ್ರುವರಿ 2012, 5:10 IST

ದಾವಣಗೆರೆ: ಪದವಿಪೂರ್ವ ವಿದ್ಯಾಭ್ಯಾಸ ಮಹತ್ವದ ಕಾಲಘಟ್ಟವಾಗಿದ್ದು, ಶಿಕ್ಷಕರು ಗುಣಮಟ್ಟದ ಬೋಧನೆ ನೀಡುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಅಭಿಪ್ರಾಯಪಟ್ಟರು.

ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ವಿಕಾಸ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೀತಮ್ಮ ಕಾಲೇಜಿನಲ್ಲಿ 70ರ ದಶಕದಲ್ಲಿ ವಿದ್ಯಾರ್ಥಿನಿಯಾಗಿದ್ದ ಶಬಿನಾ ಎಂಬುವವರು ಈಗ ಇಸ್ರೋ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ನಿರ್ಮಾಣ ಮಾಡುವಂತಹ ಅನೇಕ ಮಹಾನ್ ಪ್ರತಿಭೆಗಳನ್ನು ನಾಡಿಗೆ ನೀಡಿರುವ ಹೆಗ್ಗಳಿಕೆ ಈ ಕಾಲೇಜಿಗೆ ಇದೆ.
 
ಮಕ್ಕಳು ಪ್ರತಿಭಾನ್ವಿತರಾಗಿ ರೂಪುಗೊಂಡಿದ್ದಾರೆ ಎಂದರೆ ಆ ಕಾಲೇಜಿನ ಶಿಕ್ಷಕರ ಬೋಧನೆ ಗುಣಮಟ್ಟವಿದೆ ಎಂದರ್ಥ. ಇಲ್ಲಿ 900 ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಕಾಲೇಜಿಗೆ ಈ ವರ್ಷ 4 ನೂತನ ಕೊಠಡಿ ನಿರ್ಮಾಣ ಮಾಡಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರ ಪಾಲಿಕೆ ಸದಸ್ಯ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಹಿಂದೇಟು ಹಾಕುತ್ತಾರೆ. ಕನ್ನಡ ಶಿಕ್ಷಣದ ಬಗ್ಗೆ ಕೀಳರಿಮೆ ಬೆಳೆಯುತ್ತಿದೆ. ಮಾಧ್ಯಮ ಯಾವುದೇ ಇದ್ದರೂ, ಬೋಧನೆ ಮೌಲ್ಯಯುತವಾಗಿರಬೇಕು. ಅಂತಹ ಮೌಲ್ಯಯುತ ಶಿಕ್ಷಣಕ್ಕೆ ಸೀತಮ್ಮ ಕಾಲೇಜು ಖ್ಯಾತಿಗೊಂಡಿದೆ. ಇದೇ ರೀತಿ ಮಕ್ಕಳು ಉತ್ತಮ ಫಲಿತಾಂಶ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು
.
 ಪ್ರಾಂಶುಪಾಲ ಮೋಹನ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎನ್. ಸನಾವುಲ್ಲಾ, ದ್ರೋಣ ನಾಯ್ಕ, ಬಿ. ಪಾಲಾಕ್ಷಿ, ಡಿ. ರೇವಣ್ಣ, ಅನ್ನಪೂರ್ಣಮ್ಮ, ಕೆ. ಲಿಂಗಪ್ಪ, ಈರಣ್ಣ ಚಳಗೇರಿ ಮತ್ತಿತರರು ಉಪಸ್ಥಿತರಿದ್ದರು.ಮಧುಮತಿ, ಶ್ರುತಿ ಪ್ರಾರ್ಥಿಸಿದರು. ಶಿಕ್ಷಕ ಹಾಲೇಶಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.