ಹರಪನಹಳ್ಳಿ: ನೆರೆರಾಜ್ಯದ ಸೇವಂತಿಗೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿರುವ ಪರಿಣಾಮ, ಸೇವಂತಿಗೆ ಹೂವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ನೀಲಂ ಚಂಡಮಾರುತದ ನರ್ತನಕ್ಕೆ ಸಮದ್ಧವಾಗಿ ಬೆಳೆದುನಿಂತ ಬೆಳೆಯೂ ನೆಲಕಚ್ಚಿದೆ. ಹೀಗಾಗಿ ಸೇವಂತಿಗೆ ಪುಷ್ಪಕೃಷಿಯಲ್ಲಿ ತೊಡಗಿಸಿಕೊಂಡಿರುವ ಬೆಳೆಗಾರ ಬದುಕಿಗೆ ಸಂಕಷ್ಟದ ಬಳ್ಳಿ ಸುತ್ತಿಕೊಂಡಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಶಂಗಾರತೋಟ, ಕೋಡಿಹಳ್ಳಿ, ಚಿಗಟೇರಿ ಹೋಬಳಿಯ ಕೊಂಗನಹೊಸೂರು, ಕಸವನಹಳ್ಳಿ, ಮತ್ತಿಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ, ನೂರಾರು ರೈತರು ಪುಷ್ಪಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ತಾಲ್ಲೂಕಿನ ಪುಷ್ಪಕೃಷಿ 700ಹೆಕ್ಟೇರ್ ಪ್ರದೇಶದ ಪೈಕಿ, ಚೆಂಡು ಹೂವಿನ ಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಸೇವಂತಿಗೆ ಆಕ್ರಮಿಸಿಕೊಂಡಿದೆ.
ಸಂಪ್ರಾದಾಯಿಕ ಬೆಳೆ ಪದ್ಧತಿಯಲ್ಲಿ ಅತ್ಯಧಿಕ ನೀರಿನ ಮೂಲಗಳ ಅಗತ್ಯತೆ ಹಾಗೂ ವಿಪರೀತ ಮಾನವಸಂಪನ್ಮೂಲ ಬಳಕೆ ಅನಿವಾರ್ಯ. ಹೀಗಿದ್ದಾಗ್ಯೂ ಈ ಪದ್ಧತಿ ಲಾಭಕ್ಕಿಂತ ವೆಚ್ಚವೇ ಹೊರೆಯಾಗಿ ಪರಿಣಮಿಸುತ್ತಿತ್ತು. ಇದರಿಂದ ರೋಸಿಹೋದ ಕೆಲ ರೈತರು, ಅಗತ್ಯತೆಗೆ ಅನುಗುಣವಾಗಿ ನೀರಿನ ಸಂಪನ್ಮೂಲ ಬಯಸುವ ಹಾಗೂ ಅತಿಸಣ್ಣ ಭೂ ಹಿಡುವಳಿಯಲ್ಲಿಯೇ ಅತ್ಯಧಿಕ ಆದಾಯ ತಂದು ಸುರಿಯುವ ಸಂಜೀವಿನಿಯಾಗಿ ಸೇವಂತಿಗೆ ಕಾಣಿಸಿಕೊಂಡಿದ್ದರಿಂದ ಸೇವಂತಿಗೆ ಪುಷ್ಪಕೃಷಿಯತ್ತ ರೈತರು ಆಕರ್ಷಿತರಾದರು.
ಕೇವಲ ಅರ್ಧ ಎಕರೆ ಪ್ಲಾಟ್ನಲ್ಲಿ ಸುಮಾರು ರೂ 30-35ಸಾವಿರ ಮೊತ್ತದ ಯೋಜನಾ ವೆಚ್ಚದಲ್ಲಿ ಸುಮಾರು 35 ಕ್ವಿಂಟಲ್ನಷ್ಟು ಇಳುವರಿ ಬೆಳೆಯುವ ಸೇವಂತಿಗೆ ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ಕೆಜಿಗೆ ರೂ 100ರಿಂದ 125ರವರೆಗೂ ಮಾರಾಟವಾಗುತ್ತದೆ. ಒಳ್ಳೆಯ ದರ ಹಾಗೂ ಇಳುವರಿ ಕೈಹಿಡಿದರೆ, ಪ್ರತಿ ಬೆಳೆಗೆ ಕನಿಷ್ಠ ಖರ್ಚು-ವೆಚ್ಚ ಸರಿದೂಗಿಸಿ, ರೂ 2 ಲಕ್ಷದ ತನಕ ಲಾಭ ಕೊಡುತ್ತಿತ್ತು.
ಆದರೆ, ದಸರಾ ಸಂದರ್ಭದಲ್ಲಿ ಮಾತ್ರ ರೂ 100ರ ಗಡಿ ಅಂಚಿನಲ್ಲಿ ವ್ಯಾಪಾರವಾದ ಸೇವಂತಿಗೆ ದೀಪಾವಳಿ ಸಮೀಪಿಸುತ್ತಿದ್ದಂತೆಯೇ ನೆಲಕಚ್ಚಿದೆ. ಹೂವು ಬಿಡಿಸಿಕೊಂಡು ಮಾರುಕಟ್ಟೆಗೆ ಹೋದರೆ, ಹತ್ತು ರೂಪಾಯಿಗೆ 2-3ಕೆ.ಜಿ. ಕೇಳುತ್ತಾರೆ. ಹೂವು ಬಿಡಿಸಲು ಹಾಗೂ ಮಾಲೆ ಕಟ್ಟಲು ಪ್ರತಿ ಕೆ.ಜಿ.ಗೆ ರೂ 8ರೂಪಾಯಿ ಕೂಲಿ ಕೊಡುತ್ತೇವೆ. ಕನಿಷ್ಠ ಅವರ ಕೂಲಿಗೂ ಸರಿದೂಗದ ಪರಿಣಾಮ, ಹೊಯ್ದ ಮಾಲನ್ನು ಹಾಗೆಬಿಟ್ಟು ಹೇಳದೇ- ಕೇಳದೆ ವಾಪಸ್ ಬಂದಿದ್ದೇವೆ~ ಎಂದು ಸಂಕಟ ತೋಡಿಕೊಳ್ಳುತ್ತಾರೆ ಶಂಗಾರತೋಟದ ಬೆಳೆಗಾರರಾದ ಪಟೇಲ್ ಅಜೀಜ್, ಅಶೋಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.