ADVERTISEMENT

ಸ್ವಾರ್ಥ ದೂರವಾದರೆ ಸಂಘರ್ಷರಹಿತ ಸಮಾಜ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:10 IST
Last Updated 14 ಜುಲೈ 2012, 5:10 IST

ದಾವಣಗೆರೆ: ಎಲ್ಲ ರಂಗಗಳಲ್ಲಿ ಸಂಘರ್ಷ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸ್ವಾರ್ಥ ದೂರವಾದಾಗ ಸಂಘರ್ಷ ಇಲ್ಲವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.


ನಗರದ ಅಭಿನವ ರೇಣುಕಾ ಮಂದಿರದಲ್ಲಿ ಶುಕ್ರವಾರ ವೀರಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ನಡೆದ 17ನೇ ವರ್ಷದ ಆಷಾಢಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಧರ್ಮ ಪರಿಪಾಲನೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣಗೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ನಾಗರಿಕರು ಅದನ್ನು ಅರ್ಥಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2,000 ಮಠಗಳಿರಬಹುದು. ಅದರಲ್ಲಿ ಬಹುತೇಕ ಮಠಗಳ ಆಶಿರ್ವಾದ ಪಡೆದವರು ಜೈಲು ಸೇರಿದರು. ಸ್ವಾಮೀಜಿಗಳು ಉತ್ತಮ ವ್ಯಕ್ತಿಗಳಿಗೆ ಮಾತ್ರ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ವಾಸ ಮಾಡುವ ಸಮಾಜ, ಪದ್ಧತಿ ಯಾವಾಗಲೂ ಚರ್ಚೆಯ ವಿಷಯಗಳು. ದೇಶದಲ್ಲಿ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಸ್ಥಿತಿಗಳನ್ನು ನೆನಪಿಸಿಕೊಂಡರೆ ನೋವಾಗುತ್ತದೆ. ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇಂದಿಗೂ ಸಂಸ್ಕೃತಿ, ಆಚಾರ-ವಿಚಾರ, ಭಾಷೆಗಳು ಉಳಿದಿವೆ ಎಂದರೆ ಅದಕ್ಕೆ ಮಠಾಧೀಶರು ಕಾರಣ. ಬದಲಾವಣೆಗಳು ಒಳ್ಳೆಯದಕ್ಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಅಥಣಿ ವೀರಣ್ಣ ಅವರಿಗೆ ಧರ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಮ್ಮನಭಾವಿ ಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ, ಉಪಾಧ್ಯಕ್ಷ ದಾನಪ್ಪ ಜತ್ತಿ, ಮಾಜಿ ಶಾಸಕ ಯಜಮಾನ್‌ಮೋತಿ  ವೀರಣ್ಣ, ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ, ಮಾಗನಹಳ್ಳಿ ನಿಜಾನಂದಪ್ಪ, ಎಂ. ಮಂಜುನಾಥ್, ಸೊಪ್ಪಿನ ಮರಿಯಪ್ಪ, ಆರ್.ಎಚ್. ನಾಗಭೂಷಣ್, ಎಸ್.ಬಿ. ಪಾಟೀಲ್, ಬೆಳಗಾವಿ ವಿಜಯಕುಮಾರ್, ಪಿ. ರಾಜಕುಮಾರ್, ಎಸ್.ಎಸ್. ಸಾಲಿಮಠ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ದೇವರಮನೆ ಶಿವಕುಮಾರ್ ಸ್ವಾಗತಿಸಿದರು. ಬಿ.ವೈ. ಶ್ರೀಕಂಠಮೂರ್ತಿ ನಿರೂಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT