ಹರಿಹರ: ದೇಶದಾದ್ಯಂತ ಸಂಚರಿಸಿ ಸೋಮವಾರ ನಗರಕ್ಕೆ ಸೋಮವಾರ ಆಗಮಿಸಿದ ‘ಗಾಂಧಿ ಪರಿಕ್ರಮ ಯಾತ್ರೆ’ಗೆ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಸ್ವಾಗತಿಸಿದರು.
ಲೋಕೋಪಯೋಗಿ ಪರಿವೀಕ್ಷಣಾ ಭವನದಿಂದ ಗಾಂಧಿ ಪರಿಕ್ರಮ ಯಾತ್ರೆ ಪ್ರಾರಂಭಗೊಂಡಿತು. ಕಾರ್ಯಕರ್ತರು, ರಘುಪತಿ ರಾಘವ ರಾಜಾರಾಂ ಹಾಡನ್ನು ಹಾಡುತ್ತಾ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿ, ಗಾಂಧಿ ಅವರ ಶಾಂತಿ ಸಂದೇಶದ ಕರಪತ್ರಗಳನ್ನು ವಿತರಿಸಿದರು. ಮಹಾತ್ಮಗಾಂಧಿ ವೃತ್ತದ ಬಳಿ ಶಾಸಕ ಬಿ.ಪಿ. ಹರೀಶ್ ಯಾತ್ರೆಯನ್ನು ಸ್ವಾಗತಿಸಿ, ಶುಭ ಹಾರೈಸಿದರು.
2010ರ ಅಕ್ಟೋಬರ್ 17ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ 108 ದಿನಗಳ ಕಾಲ ನಡೆಯಲಿದೆ. ದೇಶದಾದ್ಯಂತ ಮಹಾತ್ಮ ಗಾಂಧಿ ಅವರ ಶಾಂತಿ ಸಂದೇಶವನ್ನು ಸಾರಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹರಿಹರದ ನಂತರ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಚಾಮರಾಜನಗರದ ಮೂಲಕ ಜ. 30ರಂದು ಕನ್ಯಾಕುಮಾರಿಯನ್ನು ತಲುಪಿ ಸಮಾರೋಪಗೊಳ್ಳಲಿದೆ ಎಂದು ಸಂಘಕರು ತಿಳಿಸಿದರು.
ಹಿಂದುಳಿದ ಆಯೋಗದ ಅಧ್ಯಕ್ಷ ಅಶೋಕ ಕಾಟ್ವೆ, ಬ್ಯಾಡಿಗಿ ಕ್ಷೇತ್ರದ ಮಾಜಿ ಶಾಸಕ ರುದ್ರಪ್ಪ ಲಮಾಣಿ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಕಲಾಲ್, ನಗರಸಭೆ ಸದಸ್ಯ ಕೆ.ಕೆ. ರಫೀಕ್, ಹರಿಜನ ಸೇವಕ ಸಂಘ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಡಿ. ಹನುಮಂತಪ್ಪ, ಅಖಿಲ ಭಾರತ ರಾಹುಲ್ಗಾಂಧಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಎಲ್.ಬಿ. ಹನುಮಂತಪ್ಪ, ಸ್ಯಾಮ್ಸನ್, ಪಿ. ಹನುಮಂತಪ್ಪ, ಡಿಎಸ್ಎಸ್ ತಾಲ್ಲೂಕು ಘಟಕದ ಖಜಾಂಚಿ ಆರ್. ಶ್ರೀನಿವಾಸ್, ಎಲ್. ನಿರಂಜನ್ಮೂರ್ತಿ, ಸುರೇಶ ತೆರದಾಳ್, ಮೈಲಪ್ಪ, ಎಸ್.ಕೆ. ರಾಮಪ್ಪ, ಜಡಿಯಪ್ಪ, ಎಸ್. ಷಣ್ಮುಖಪ್ಪ, ಪಾದಗಟ್ಟೆ ಊರಮ್ಮ ಸೇವಾ ಸಮಿತಿ ಸದಸ್ಯರು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.