
ದಾವಣಗೆರೆ: ಮೂರ್ನಾಲ್ಕು ದಿನದ ಮಾಂಸ, ಮೀನು.. ಕೊಳೆತು ನಾರುವ ತೊಟ್ಟಿ. ಕುಡಿದು ಗುಡ್ಡೆ ಹಾಕಿದ ಬಾಟಲಿಗಳಿಂದ ಹರಡುವ ಕೆಟ್ಟ ವಾಸನೆ.. ಕುಡಿಯುವ ನೀರಿನ ತೊಟ್ಟಿಯಲ್ಲಿ ಒದ್ದಾಡುವ ಹುಳುಗಳು... ತಿಂಗಳಾದರೂ ವಿಲೇವಾರಿ ಮಾಡದೆ ಹಾಗೆಯೇ ಸಂಗ್ರಹಿಸಿದ ಕಸ...
ಇದು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಂ. ರುದ್ರಮುನಿಸ್ವಾಮಿ ನೇತೃತ್ವದ ತಂಡ ನಗರದ ಪ್ರಸಿದ್ಧ ಮಾಂಸಹಾರಿ ಹೋಟೆಲ್ಗಳು, ಕಲ್ಯಾಣ ಮಂದಿರಗಳ ಮೇಲೆ ದಾಳಿ ನಡೆಸಿದಾಗ ಕಂಡುಬಂದ ದೃಶ್ಯ.
ಆರಂಭದಲ್ಲಿ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದ ಮೇಲೆ ದಾಳಿ ಮಾಡಿದಾಗ ಕಸ ವಿಲೇವಾರಿ ಮಾಡದೇ ಹಾಗೆಯೇ ಸಂಗ್ರಹಿಸಿಟ್ಟ ದೃಶ್ಯ ಕಂಡುಬಂತು. ಕಸಕ್ಕೆ ಹಾಕಿದ ಬೆಂಕಿಯಿಂದ ಸುತ್ತಲು ಹೊಗೆ ಹಬ್ಬಿದ್ದು ವಾಯು ವಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಕುಡಿಯುವ ನೀರಿನ ತೊಟ್ಟಿ ತೆರೆದು ಬಿಟ್ಟಿದ್ದು, ಅದು ಹುಳಹುಪ್ಪಟೆಗಳ ತಾಣವಾಗಿತ್ತು.ಪ್ರಸಿದ್ಧ ಕಲ್ಯಾಣ ಮಂಟಪದ ಕತೆ ಈ ರೀತಿಯಾದರೆ, ಶಾಮನೂರು ರಸ್ತೆಯಲ್ಲಿರುವ ಸ್ಪಂದನ ಹಾಗೂ ಗ್ರೀನ್ಪಾರ್ಕ್ ಹೋಟೆಲ್ಗಳಲ್ಲಿ ಹಳೆಯ ಮಾಂಸ ಸಂಗ್ರಹಿಸಿಡಲಾಗಿತ್ತು. ಸ್ವಚ್ಛತೆ ಇರಲಿಲ್ಲ.
ಯುಜಿಡಿಗೆ ಪಾತ್ರೆ, ಲೋಟ ತೊಳೆದ ನೀರು ಬಿಡಲಾಗುತ್ತಿತ್ತು. ತರಕಾರಿ ಕೊಳೆತು ನಾರುತ್ತಿದ್ದವು. ಚಾಮುಂಡಿ ಬಾರ್ನಲ್ಲಿ ಬಾಟಲಿಗಳ ಗುಡ್ಡ ಸೃಷ್ಟಿಯಾಗಿತ್ತು. ಸೊಳ್ಳೆಗಳು ವಿಪರೀತ ಮನೆ ಮಾಡಿದ್ದವು. ಸುಕ್ಷೇಮ ಆಸ್ಪತ್ರೆ, ಆಶ್ರಯ ಆಸ್ಪತ್ರೆಗಳಿಗೂ ಭೇಟಿ ನೀಡಲಾಯಿತು.
ಆಸ್ಪತ್ರೆಗಳು ಸೇರಿದಂತೆ ದಾಳಿ ನಡೆಸಿದ ಹೋಟೆಲ್ಗಳು ಹಲವು ವರ್ಷದಿಂದ ವ್ಯಾಪಾರ ಪರವಾನಗಿ ಪಡೆಯದೇ ಇರುವುದು ಕಂಡು ಬಂತು. ಎಲ್ಲರಿಗೂ ನೋಟಿಸ್ ನೀಡಲಾಯಿತು. ಪಾಲಿಕೆ ಎಂಜಿನಿಯರ್ ಜಾಫರ್, ತಿಮ್ಮಪ್ಪ, ಗೋಪಾಲ್ ಮದನ್, ಹೊನ್ನಪ್ಪ, ಗೋಪಾಲನಾಯ್ಕ, ಪ್ರಕಾಶ್, ರಾಮಪ್ಪ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.