ADVERTISEMENT

‘ಒಳಪಂಗಡ ಹಾವಳಿಯಿಂದ ಸಮಾಜ ಛಿದ್ರ’

ವೀರಗಂಗಾಧರ ಸ್ವಾಮೀಜಿ ಅವರ ಲಿಂಗೈಕ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:39 IST
Last Updated 21 ಡಿಸೆಂಬರ್ 2013, 9:39 IST

ದಾವಣಗೆರೆ: ‘ಒಳಪಂಗಡಗಳ ಹಾವಳಿಯಿಂದ ವೀರಶೈವ ಲಿಂಗಾಯತ ಸಮಾಜ ಛಿದ್ರವಾಗುತ್ತಿದೆ’ ಎಂದು ಎಂದು ಹರಿಹರದ ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಕಟ್ಟರು.

ರೇಣುಕಾ ಮಂದಿರದಲ್ಲಿ ಶುಕ್ರವಾರ ರೇಣುಕ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರಗಂಗಾಧರ ಸ್ವಾಮೀಜಿ ಅವರ 31ನೇ ವರ್ಷದ ಲಿಂಗೈಕ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ವೀರಶೈವ ಲಿಂಗಾಯತ ಸಮಾಜ ಮರ ಇದ್ದಂತೆ. ಒಳಪಂಗಡಗಳು ಮರದ ಕೊಂಬೆಗಳಿದ್ದಂತೆ. ಆದರೆ, ಮರದ ಬುಡಕ್ಕೆ ಕೊಡಲಿಪೆಟ್ಟು ಬಿದ್ದಾಗ ಎಲ್ಲರೂ ಸಂಘಟಿತರಾಗಬೇಕು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಧಾರ್ಮಿಕ ನಿರಾಸಕ್ತಿ ಹೆಚ್ಚುತ್ತಿದೆ. ಪರಿಣಾಮವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ವಿರಳವಾಗುತ್ತಿವೆ. ತಿಂಗಳ ಕಾಲ ನಡೆಯುತ್ತಿದ್ದ ಆಷಾಢಮಾಸ ಪೂಜೆಯ ವೈಭವ ಕಣ್ಮರೆಯಾಗಿದೆ.

ಮಕ್ಕಳಿಗೆ ಸಂಸ್ಕಾರ ಕೊಡಿಸುವ ಕಾರ್ಯ ಪೋಷಕರಿಂದ ಆಗುತ್ತಿಲ್ಲ. ಮಕ್ಕಳು ಮಾಡುವ ಸಂಸ್ಕಾರ ರಹಿತ ಕಾರ್ಯವನ್ನೇ ಪೋಷಕರು ಪ್ರೋತ್ಸಾಹಿಸುತ್ತಿರುವಂತಹ ದುರಂತ ಕಾಣುತ್ತಿದ್ದೇವೆ’ ಎಂದರು.

ರಂಭಾಪುರಿ ಪೀಠಾಧ್ಯಕ್ಷ ಪ್ರಸನ್ನ ರೇಣುಕ ರಾಜದೇಶಿಕೇಂದ್ರ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ  ಆಶೀರ್ವಚನ ನೀಡಿದರು.
ರೇಣುಕ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಬಸವರಾಜಯ್ಯ, ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಕ್ಕಳ ತಜ್ಞವೈದ್ಯ ಡಾ.ಎನ್.ಕೆ. ಕಾಳಪ್ಪನವರ್ ಅವರನ್ನು ಸನ್ಮಾನಿಸಲಾಯಿತು.

ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವರಮನಿ ಶಿವಕುಮಾರ್, ಕೆ.ತಿಪ್ಪಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.