ADVERTISEMENT

‘ಖಾತ್ರಿ’ ಬಾಕಿ ವಿಳಂಬ: ಅಧಿಕಾರಿಗಳಿಗೆ ದಿಗ್ಬಂಧನ

ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಮಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:43 IST
Last Updated 21 ಡಿಸೆಂಬರ್ 2013, 9:43 IST

ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ವೇತನ ಪಾವತಿಸದ ಗ್ರಾಮ ಪಂಚಾಯ್ತಿ ಕ್ರಮ ವಿರೋಧಿಸಿ ನೂರಾರು ಕಾರ್ಮಿಕರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಕಾರ್ಮಿಕ ಮುಖಂಡ ಬಳಿಗಾನೂರು ಮಲ್ಲೇಶ್‌ ಮಾತನಾಡಿ, ಖಾತ್ರಿ ಯೋಜನೆ ಅಡಿ ಕರ್ತವ್ಯ ನಿರ್ವಹಿಸಿದ್ದ ಕಾರ್ಮಿಕರಿಗೆ ಎರಡು ತಿಂಗಳು ಕಳೆದರೂ ವೇತನ ಪಾವತಿಸಿಲ್ಲ. ಕೇಳಿದರೆ ಇಂದು– ನಾಳೆ ಎಂದು ಸಬೂಬು ಹೇಳುತ್ತಲೇ ಕಾರ್ಮಿಕರನ್ನು ಸಾಗಹಾಕುತ್ತಾರೆ.

ದಿನ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕಾರ್ಮಿಕರಿಗೆ ಎರಡು ತಿಂಗಳು ಕಾಲ ವೇತನ ಪಾವತಿಸದೇ ಇರುವುದರಿಂದ ಕಾರ್ಮಿಕ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ದುಡಿಮೆಯ ಹಣ ತೋರಿಸಿ ದೈನಂದಿನ ಬಳಕೆ ಸಾಮಾಗ್ರಿ ಖರೀದಿಸಿದ್ದಾರೆ. ಸಾಲ ಕೊಟ್ಟವರು ಪೀಡಿಸುತ್ತಿದ್ದಾರೆ. ಹೀಗಾಗಿ ಕಾರ್ಮಿಕರು ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

ಕಾರ್ಮಿಕರಿಗೆ ವೇತನ ಪಾವತಿಸದ ಪಂಚಾಯ್ತಿ ಅಧಿಕಾರಿಗಳು, ಕಾಯ್ದೆಯ ನಿಯಮ ಉಲ್ಲಂಘಿಸಿ ಜೆಸಿಬಿ ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯ್ತಿ ಲೆಕ್ಕ ಪರಿಶೋಧನಾ ನಿರ್ದೇಶಕ ಡಿ.ಎಂ. ನಾಯಕ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮುಖಂಡರಾದ ಮಹಬೂಬ್‌ ಸಾಹೇಬ್‌, ಎಸ್‌.ಕೆ. ಬಸವರಾಜ, ಕೋಟೆಪ್ಪ, ರಾಜು, ಮಡಿವಾಳರ ಬಸಪ್ಪ, ರಘುಪತಿ, ಬಸಪ್ಪ, ಮಹದೇವಕ್ಕಾ, ಶಂಕರಮ್ಮ, ಗಂಗಮ್ಮ, ಚನ್ನಬಸಪ್ಪ, ಷಣ್ಮುಖಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.