ADVERTISEMENT

‘ಧರ್ಮಬೋಧನೆ ಸನ್ಮಾರ್ಗದ ದಾರಿದೀಪ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:50 IST
Last Updated 9 ಡಿಸೆಂಬರ್ 2013, 8:50 IST

ಹರಪನಹಳ್ಳಿ:  ‘ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ’ ಎಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ನಾಗರಕೊಂಡ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಬಸವೇಶ್ವರ ದೇಗುಲದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ನಂತರ ನಡೆದ ಧರ್ಮಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಗುರು ಹಿರಿಯರಲ್ಲಿ ಭಯ, ಗೌರವ ಬೆಳೆಸಿಕೊಳ್ಳಬೇಕು. ಸಂಬಂಧಗಳನ್ನು ಗೌರವಿಸಿ, ಪೋಷಿಸಿರಿ ಎಂದು ಸಲಹೆ ನೀಡಿದರು.

ಧರ್ಮದ ಉಪದೇಶ ಇಂದು ಕೇವಲ ಸಭೆ– ಸಮಾರಂಭಗಳಿಗೆ ಸೀಮಿತವಾಗಿದೆ. ಸಾರ್ವಜನಿಕರು ಪಾಲನೆ ಮಾಡುತ್ತಿಲ್ಲ ಎಂದು ವಿಷಾದಿಸಿದ ಅವರು, ಧರ್ಮ ಮನುಷ್ಯನ ಜೀವನದ ಸನ್ಮಾರ್ಗಕ್ಕೆ ಪೂರಕವಾಗಿರಬೇಕು ಎಂದರು.
ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ದೇಗುಲಗಳು ಸೌಹಾರ್ದತೆಯನ್ನು ಸಾರುವ ಧಾರ್ಮಿಕ ಕೇಂದ್ರಗಳಾಗಬೇಕು.  ಗ್ರಾಮಗಳಲ್ಲಿ ಸ್ವಚ್ಛತೆ ಕಣ್ಮರೆಯಾಗುತ್ತಿದೆ.  ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.

ಅಡವಿಹಳ್ಳಿ ಹಾಲಸ್ವಾಮಿ ಸಂಸ್ಥಾನದ ಶಿವಯೋಗಿ ಹಾಲಸ್ವಾಮಿ ನೇತೃತ್ವ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬಿ. ಭಾಗ್ಯಮ್ಮ ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪಿ. ರಾಮನಗೌಡ, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಸಾಸ್ವಿಹಳ್ಳಿ ಚನ್ನಬಸವನಗೌಡ, ರಾಜ್ಯ ಬೀಜನಿಗಮದ ನಿರ್ದೇಶಕ ನಾಗರಕಟ್ಟೆ ರಾಜೇಂದ್ರಪ್ರಸಾದ್‌,  ಸುಭಾಸ್‌ಶ್ಚಂದ್ರಬೋಸ್‌, ಕುರುಬ ಸಮಾಜದ ಅಧ್ಯಕ್ಷ ಎಚ್‌.ಬಿ. ಪರಶುರಾಮಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಕೆ. ಪ್ರಕಾಶ್‌, ಎಚ್‌.ಕೆ. ಹಾಲೇಶ್‌, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಬೆಣ್ಣಿಹಳ್ಳಿ ನಾಗಣ್ಣ, ಅರಸೀಕೆರೆ ಸುರೇಶ್‌, ಬಿಜೆಪಿ ಮುಖಂಡ ಜಿ. ನಂಜನಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಕಿತ್ತೂರು ಓಬಪ್ಪ, ಸಾಸ್ವಿಹಳ್ಳಿ ಕೆ. ಚನ್ನಬಸವನಗೌಡ,  ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.