ADVERTISEMENT

‘ಮಠಗಳು ಜಾತಿ ಬಿಟ್ಟು ನೀತಿ ಬೆಂಬಲಿಸಲಿ’

ಚನ್ನಬಸವ ಶಿವಯೋಗಿ ಅವರ 7ನೇ ವರ್ಷದ ಸ್ಮರಣೋತ್ಸವದಲ್ಲಿ ಗುರುಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 8:34 IST
Last Updated 27 ಸೆಪ್ಟೆಂಬರ್ 2013, 8:34 IST
ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಮ್ಮತ್ತಹಳ್ಳಿ– ಪಾಂಡೋಮಟ್ಟಿ ವಿರಕ್ತಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರ 7ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿರಕ್ತಮಠದ ಗುರಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸತ್‌ ಸದಸ್ಯ ಸಿದ್ದೇಶ್ವರ, ಶಾಸಕ ರಾಜೇಶ್‌, ಮಾಜಿ ಶಾಸಕರಾದ ಮಹಿಮ ಜೆ. ಪಟೇಲ್‌, ಎಸ್‌.ವಿ. ರಾಮಚಂದ್ರ ಇದ್ದರು
ಹರಪನಹಳ್ಳಿ ತಾಲ್ಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಮ್ಮತ್ತಹಳ್ಳಿ– ಪಾಂಡೋಮಟ್ಟಿ ವಿರಕ್ತಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರ 7ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿರಕ್ತಮಠದ ಗುರಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸತ್‌ ಸದಸ್ಯ ಸಿದ್ದೇಶ್ವರ, ಶಾಸಕ ರಾಜೇಶ್‌, ಮಾಜಿ ಶಾಸಕರಾದ ಮಹಿಮ ಜೆ. ಪಟೇಲ್‌, ಎಸ್‌.ವಿ. ರಾಮಚಂದ್ರ ಇದ್ದರು   

ಹರಪನಹಳ್ಳಿ: ಕಲುಷಿತಗೊಂಡಿರುವ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತನೆಯ ಮಾರ್ಗದಲ್ಲಿ ಕೊಂಡೊಯ್ಯಲು ಮಠಗಳು ಹಾಗೂ ಮಠಾಧೀಶರ ಮಾರ್ಗದರ್ಶನ ಅಗತ್ಯ ಎನ್ನುವ ಮಾತುಗಳು ಎಲ್ಲೆಡೆಯಿಂದಲೂ ಕೇಳಿ ಬರುತ್ತಿವೆ. ಆದರೆ, ಇಂತಹ ಮಾರ್ಗದರ್ಶನ ಕೆಲ ಸಂದರ್ಭದಲ್ಲಿ ವೈರತ್ವಗಳು ಬೆರೆತುಕೊಂಡಿರುತ್ತವೆ ಎಂದು ಕಮ್ಮತ್ತಹಳ್ಳಿ– ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ವಿಷಾದಿಸಿದರು.

ತಾಲ್ಲೂಕಿನ ಕಮ್ಮತ್ತಹಳ್ಳಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರ ೭ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನದ ನೇತೃತ್ವವಹಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆಯು ಸಾಮಾಜಿಕ ವ್ಯವಸ್ಥೆಗೆ ಕಂಟಕಪ್ರಾಯ ಆಗುವ ಮೂಲಕ ಇಡೀ ವ್ಯವಸ್ಥೆಯನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ. ಅಂತಹ ಜಾತಿ ವ್ಯವಸ್ಥೆಗೆ ವಿರುದ್ಧವಾಗಿ ನೀತಿ ವ್ಯವಸ್ಥೆ ಎಲ್ಲಿ ಮನೆ ಮಾಡಿರುತ್ತದೆಯೋ ಆ ನೀತಿ ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಳ್ಳಬೇಕಾದುದು ಮಠಗಳ ಕರ್ತವ್ಯ.

ಮಠಗಳು ನೀತಿಯ ಕೆಲಸವನ್ನು ಮಾಡಬೇಕೆ ಹೊರತು; ಜಾತಿಯ ಕೆಲಸವನ್ನಲ್ಲ ಎಂದರು. ನೀತಿಯ ಸೂತ್ರವನ್ನು ಜಾರಿಗೊಳಿಸುವ ಮೂಲಕ ಹೊಸ ಧಾರ್ಮಿಕ ಕ್ರಾಂತಿ ಯುಗವನ್ನು ಹುಟ್ಟು ಹಾಕಿದವರು ಲಿಂಗೈಕ್ಯ ಚನ್ನಬಸವ ಶಿವಯೋಗಿ ಸ್ವಾಮೀಜಿ ಎಂದು ಅವರು ಸ್ಮರಿಸಿದರು.

ಚನ್ನಗಿರಿ ಭಾಗದಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವುದರ ಹಿಂದೆ ಪಾಂಡೋಮಟ್ಟಿ– ಕಮ್ಮತ್ತಹಳ್ಳಿ ವಿರಕ್ತಮಠದ ಶ್ರಮವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಆದರೆ, ನೋವಿನ ಸಂಗತಿ ಎಂದರೆ, ಯೋಜನೆಯನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಮಠವನ್ನು ಮರೆತಿದ್ದು, ಕನಿಷ್ಠಪಕ್ಷ ಲೋಕಾರ್ಪಣೆಯಲ್ಲಿ  ಸೌಜನ್ಯಕ್ಕೂ ಸ್ಮರಿಸಲು ಯಾರು ಮುಂದಾಗಲಿಲ್ಲ  ಎಂದು ಸಂಸತ್್ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ಎಚ್್.ಪಿ. ರಾಜೇಶ್್, ಸಂಸತ್್ ಸದಸ್ಯ ಜಿ.ಎಂ. ಸಿದ್ದೇಶ್ವರ,
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಮಹಿಮ ಜೆ.ಪಟೇಲ್‌, ಬಾಗಲಕೋಟೆ ಶಿರೂರು ನಿಸರ್ಗ ಚಿಕಿತ್ಸಾ ಕೇಂದ್ರ ಡಾ.ಬಸವಲಿಂಗ ಸ್ವಾಮೀಜಿ ಮತ್ತು ಅರಸೀಕೆರೆ ಸಿಂಗಟಗೇರಿ ಮಹಾಲಿಂಗ ಸ್ವಾಮೀಜಿ ಮಾತನಾಡಿದರು.

ಇಳಕಲ್ ಚಿತ್ತರಗಿ ಸಂಸ್ಥಾನದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ, ಅರಸೀಕೆರೆ ಮಾಡಾಳ್ ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರಿ ಸ್ವಾಮೀಜಿ ನೇತೃತ್ವವಹಿಸಿದ್ದರು.

ಎಂ.ಟಿ.ಬಸವನಗೌಡ, ಹಾಲಪ್ಪ, ವೈ.ದೇವೇಂದ್ರಪ್ಪ, ಎಸ್್.ಮಂಜುನಾಥ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉದ್ಯಮಿ ಗಡಿಗುಡಾಳ್ ಸುರೇಶ್, ಎಂಜಿನಿಯರ್ಮೂ ಲಿಮನಿ ಚನ್ನಪ್ಪ, ಬೆಂಗಳೂರು ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರವನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.