ದಾವಣಗೆರೆ: ಆರ್ಎಂಸಿ ಠಾಣೆ ವ್ಯಾಪ್ತಿಯ ಅಣ್ಣಾನಗರದ ಕರಿಬಸವೇಶ್ವರ ಇಂಡಸ್ಟ್ರೀಸ್ ರೈಸ್ಮಿಲ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 450 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ, ದಾವಣಗೆರೆ ಜಿಲ್ಲಾ ಡಿಸಿಐಬಿ ವಿಭಾಗದ ಪೊಲೀಸ್ ಇನ್ಸ್ಟೆಕ್ಟರ್ ಜೆ.ಲಕ್ಷ್ಮಣ್ ನೇತೃತ್ವದಲ್ಲಿ ದಾಳಿ ಮಾಡಿ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಕರಿಬಸವೇಶ್ವರ ಇಂಡಸ್ಟ್ರೀಸ್ ರೈಸ್ಮಿಲ್ ಮಾಲೀಕ ಕೋಗುಂಡಿ ಬಕ್ಕೇಶ್, ಮ್ಯಾನೇಜರ್ ಸಿದ್ದಯ್ಯ ಮತ್ತು ಕಾವಲುಗಾರ ಹೇಮಯ್ಯ ಅವರ ವಿರುದ್ಧ ಆರ್ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಬಾಗಿಲು ಮುರಿದು ನಗದು, ಚಿನ್ನಾಭರಣ ಕಳವು
ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಮಸೀದಿ ಹಿಂಭಾಗದ ಪಿಂಜಾರ್ ಗಲ್ಲಿಯಲ್ಲಿ ಗುರುವಾರ ರಾತ್ರಿ ಮನೆಯ ಬಾಗಿಲು ಮುರಿದು ಕಳ್ಳರು ₹ 30 ಸಾವಿರ ನಗದು, ₹35 ಸಾವಿರ ಮೌಲ್ಯದಬಂಗಾರದ ಆಭರಣ, ಗ್ಯಾಸ್ಸಿಲಿಂಡರ್ ದೋಚಿದ್ದಾರೆ.
ಪಿಂಜಾರ ಗಲ್ಲಿಯ ಅಜ್ಗರ್ ಅಲಿ ಅವರು ಸಂಬಂಧಿಕರ ಮದುವೆ ಕಾರ್ಯ ನಿಮಿತ್ತ ಗುರುವಾರಬಿಸ್ಮಿಲ್ಲಾ ಲೇಔಟ್ಗೆ ಹೋಗಿದ್ದರು. ‘ರಾತ್ರಿ ಮನೆಯ ಬಾಗಿಲು ಮುರಿದ ಕಳ್ಳರು ಬೀರುವಿನಲ್ಲಿದ್ದ ₹ 30 ಸಾವಿರ ನಗದು, ₹ 35 ಸಾವಿರ ಮೌಲ್ಯದ 10 ಗ್ರಾಂನ ಉಂಗುರ,ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ದೋಚಿದ್ದಾರೆ’ ಎಂದು ಅವರು ದೂರು ಸಲ್ಲಿಸಿದ್ದಾರೆ.
₹88 ಸಾವಿರ ವಂಚನೆ
ಬ್ಯಾಂಕ್ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಹೇಳಿದ ಅಪರಿಚಿತ ವ್ಯಕ್ತಿಯೊಬ್ಬ ₹88,058 ವಂಚಿಸಿರುವ ಪ್ರಕರಣ ಇಲ್ಲಿನ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಜಗಳೂರು ಪಟ್ಟಣದ ಮುಸ್ಲಿಂ ಕಾಲೊನಿಯ ದಾದಾಪೀರ್ ಹಣ ಕಳೆದುಕೊಂಡವರು. ಬ್ಯಾಂಕ್ ಕಸ್ಟಮರ್ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ, ದಾದಾಪೀರ್ ಅವರಿಂದ ಬ್ಯಾಂಕ್ ಮಾಹಿತಿ ಹಾಗೂ ಒಟಿಪಿ ನಂಬರ್ ಪಡೆದುಕೊಂಡು ಹಣ ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.