ADVERTISEMENT

ಒ.ಜಿ.ಕುಪ್ಪಂ ಗ್ಯಾಂಗ್‌ನ 11 ಮಂದಿ ಬಂಧನ

₹ 22 ಲಕ್ಷ ವಶ* ಸಹಾಯ ಮಾಡುವ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:06 IST
Last Updated 20 ಜುಲೈ 2021, 4:06 IST
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಕಳ್ಳತನ ಕುರಿತು ಸೋಮವಾರ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಜೊತೆ ವಶಪಡಿಸಿಕೊಂಡ ನಗದು ಹಾಗೂ ಆರೋಪಿಗಳು ಇದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಕಳ್ಳತನ ಕುರಿತು ಸೋಮವಾರ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಜೊತೆ ವಶಪಡಿಸಿಕೊಂಡ ನಗದು ಹಾಗೂ ಆರೋಪಿಗಳು ಇದ್ದಾರೆ.   

ದಾವಣಗೆರೆ: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಒ.ಜಿ. ಕುಪ್ಪಂ ಗ್ಯಾಂಗ್‌ನ11 ಮಂದಿಯನ್ನು ಬಂಧಿಸಿರುವ ಪೊಲೀಸರು ₹22 ಲಕ್ಷ, 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒ.ಜಿ. ಕುಪ್ಪಂ ಗ್ರಾಮದನಾಗರಾಜ್ (50 ) ಬಿ.ಚಿನ್ನು (38) ಗೊಗಲು ತುಳಸೀಧರ (37) ಕೆ. ವೆಂಕಟೇಶ್ (36) ಜಿ.ಸ್ಯಾಮ್ಸನ್ (41) ವಿನೋದ್ (41), ಸತೀಶ್(27), ಪಿ.ಮೋಹನ್ ರಾವ್‌ (68), ಕೆ.ಸುಬ್ರಮಣಿ (32), ಪಿ.ಸುಬ್ರಮಣ್ಯ (31) ವೆಂಕಟೇಶಲು(37) ಬಂಧಿತರು.

‘2018ರಿಂದ ಜಿಲ್ಲೆಯಲ್ಲಿ ನಡೆದಿರುವ 13 ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದು, ಕಳ್ಳತನ ಮಾಡಲು ಬಳಸುತ್ತಿದ್ದ 20 ಬೇರಿಂಗ್ ಬಾಲ್, 2 ತುರಿಕೆ ಪುಡಿ ಪ್ಯಾಕೇಟ್, ಕ್ಯಾಟರ್ ಬಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೋಮವಾರ ತಿಳಿಸಿದರು.

ADVERTISEMENT

‘ಜುಲೈ 19ರಂದು ಬೆಳಿಗ್ಗೆ ದಾವಣಗೆರೆ ತಾಲ್ಲೂಕಿನ ಬಾತಿ ಸುಗರ್ ಫ್ಯಾಕ್ಟರಿ ಹತ್ತಿರವಿರುವ ಪಾಳು ಬಿದ್ದ ವಸತಿ ಗೃಹದಲ್ಲಿ ಪೊಲೀಸರು ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಜ ಬಾಯಿ ಬಿಟ್ಟಿದ್ದಾರೆ. ಇವರು ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಇವರು ಕಳ್ಳತನ ಮಾಡುತ್ತಿದ್ದರು’ ಎಂದರು.

‘ತಮಿಳುನಾಡು ಹಾಗೂ ಬೆಂಗಳೂರು ಪೊಲೀಸರು ಮೂವರಿಂದ ನಾಲ್ವರು ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ಆದ್ರೆ ಇದೇ ಮೊದಲ ಬಾರಿಗೆ 11 ಮಂದಿ ಬಂಧಿಸಲಾಗಿದೆ. ಯಾರಿಗೂ ಹಿಂಸೆ ಮಾಡದೇ ಹಣ ದೋಚುವುದು ಇವರ ಹವ್ಯಾಸವಾಗಿತ್ತು’ ಎಂದು ತಿಳಿಸಿದರು.

ಬ್ಯಾಂಕ್‌ಗಳಿಂದ ಹಣ ತರುವವರೇ ಟಾರ್ಗೆಟ್:

‘ಬ್ಯಾಂಕ್‌ಗಳು, ಕೋಆಪರೇಟಿವ್ ಸೊಸೈಟಿ, ಸಬ್‌ರಿಜಿಸ್ಟ್ರಾರ್ ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇವರ 8ರಿಂದ 10 ಜನರ ತಂಡ ಬರುತ್ತಿತ್ತು. ಹೆಚ್ಚಿನ ಹಣ ಡ್ರಾ ಮಾಡಿಕೊಂಡು ಬರುವುದನ್ನೇ ನೋಡಿ ಬ್ಯಾಂಕ್‌ನ ಒಳಗಡೆ ಇರುತ್ತಿದ್ದ ವ್ಯಕ್ತಿ ಹೊರಗಡೆ ಕುಳಿತಿದ್ದ ತಂಡಕ್ಕೆ ಮಾಹಿತಿ ನೀಡುತ್ತಿದ್ದ. ಆ ತಂಡದವರು ನೋಟನ್ನು ಎಸೆದು ‘ನಿಮ್ಮ ಹಣ ತೆಗೆದುಕೊಳ್ಳಿ’ ಎಂದು ಬೇರೆಡೆ ಗಮನ ಸೆಳೆದರೆ ಅಲ್ಲಿಯೇ ಇರುತ್ತಿದ್ದ ಕೆಲವರು ಹಣವನ್ನು ಕಸಿದು ಪರಾರಿಯಾಗುತ್ತಿದ್ದರು’ ಎಂದು ರಿಷ್ಯಂತ್ ಅವರು ಮಾಹಿತಿ ನೀಡಿದರು.

ಡಿಸಿಆರ್‌ಬಿ ಪೊಲೀಸ್ ಉಪಾಧೀಕ್ಷಕ ಬಿ.ಎಸ್‌. ಬಸವರಾಜ್ ನೇತೃತ್ವದಲ್ಲಿ ಸಿಬ್ಬಂದಿ ಎಂ. ಅಂಜಿನಪ್ಪ, ಎಎಸ್‌ಐ , ಕೆ.ಸಿ.ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ರಮೇಶ ನಾಯ್ಕ , ಬಸವರಾಜ, ನಟರಾಜ್, ಸುರೇಶ, ಮಲ್ಲಿಕಾರ್ಜುನ, ಬಾಲರಾಜು, ರಾಘವೇಂದ್ರ, ಶಾಂತರಾಜು, ಉಮೇಲ್ ಬಿಸನಾಳ, ನಿಂಗರಾಜು ಪ್ರಶಾಂತ ಕುಮಾರ ತಂಡದಲ್ಲಿ ಭಾಗವಹಿಸಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.