ಮಲೇಬೆನ್ನೂರು: ಇಲ್ಲಿನ ಕರ್ನಾಟಕ ನೀರಾವರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು ಡಿ. 29 ರಂದು ಭದ್ರಾ ಐಸಿಸಿ ಸಭೆಯಲ್ಲಿ ಬೇಸಗೆ ಹಂಗಾಮಿಗೆ ಜ. 15ರಿಂದ 120 ದಿನ ಸತತ ನೀರು ಹರಿಸಲು ನಿರ್ಧರಿಸಿ ಎಂದು ಆಗ್ರಹಿಸಿ ಸೋಮವಾರ ಅನಿರ್ದಿಷ್ಟ ಅವಧಿ ಧರಣಿ ಆರಂಭಿಸಿದರು.
ಭದ್ರಾನಾಲೆಯಲ್ಲಿ ನೀರು ಬಿಡುವ ದಿನಾಂಕ ಘೋಷಣೆ, ಸಕಾಲಕ್ಕೆ ಬತ್ತದ ಬೀಜ ದೊರಕುವ ವ್ಯವಸ್ಥೆ ಹಾಗೂ ಸಮರ್ಪಕ ನೀರಿನ ವಿತರಣೆ ಬೇಡಿಕೆ ಎಂದು ಧರಣಿ ನಿರತರು ಹೇಳಿದರು.
ಐಸಿಸಿ ಸಮಿತಿಯಲ್ಲಿ ಕೊನೆಭಾಗದ ಸದಸ್ಯರ ಮಾತಿಗೆ ಬೆಲೆ ಇಲ್ಲ. ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಓಬಿರಾಯನ ಕಾಲದಲ್ಲಿ ರಚಿಸಿದ ಐಸಿಸಿ ಸಮಿತಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಸಂಚಾಲಕ ಕೆ. ಬೇವಿನಹಳ್ಳಿ ಮಹೇಶ್ ದೂರಿದರು.
ಧರಣಿ ನಿರತರೊಂದಿಗೆ ಕಾರ್ಯಪಾಲಕ ಎಂಜಿನಿಯರ್ ಸಿ. ವಿರೂಪಾಕ್ಷಪ್ಪ, ಎಇಇ ಜೆ. ಮಂಜುನಾಥ್ ಮಾತನಾಡಿದರು.
ಅಣೆಕಟ್ಟೆಯಲ್ಲಿ ಲಭ್ಯ ಇರುವ ನೀರಿನ ಮಾಹಿತಿ, ಹಿಂದಿನ ಬೇಸಗೆ ಹಂಗಾಮಿ ನಲ್ಲಿ ನಾಲೆಗೆ ಬಿಡುಗಡೆ ಮಾಡಿದ ನೀರಿನ ವಿವರ ನೀಡಿದರು. ಸಮಸ್ಯೆ ಕುರಿತು ಚರ್ಚಿಸಲು ಮಂಗಳವಾರ ಹಮ್ಮಿಕೊಂಡಿರುವ ಸಮಾಲೋಚನಾ ಸಭೆಗೆ ಬರಲು ಕೋರಿದರು.
ಸಮಾಲೋಚನಾ ಸಭೆಗೆ ಬರಲು ಒಪ್ಪಿದ ರೈತರು, ಮಲವಗೊಪ್ಪದ ಐಸಿಸಿ ಸಮಿತಿಯಲ್ಲಿ ಭಾಗವಹಿಸಿಲು ಅನುಮತಿ ಕೊಡಿಸಿ ಎಂದರು.
ಮೆಣಸಿನಹಾಳ್ ರುದ್ರಗೌಡ, ದೇವರಾಜ್, ನಿಜಗುಣ, ಲೋಕೇಶ್, ಬೆಟ್ಟಪ್ಪ, ತಿಮ್ಮನಗೌಡ, ಲಿಂಗನಗೌಡ, ರಂಗಪ್ಪ, ಸಿರಿಗೆರೆ ರಾಜಣ್ಣ ಬಾವಿಮನೆ ಪುಟ್ಟವೀರಪ್ಪ, ಕುಬೇರಪ್ಪ, ಕಲ್ಲಕೇರ ಮಂಜಪ್ಪ, ಗುತ್ತೂರು ಮಂಜಪ್ಪ ಇದ್ದರು.
ಪೊಲೀಸರು ಭದ್ರತೆ ಒದಗಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.