ದಾವಣಗೆರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಜೂನ್ 21ರಂದು ‘ಮಹಾಯೋಗಿಗಳ ಮಹಾಸಂಗಮ‘ ಹಾಗೂ ‘ದೀಪ ಯಜ್ಞ’ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದ ಅಂಗವಾಗಿ ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರು ಹಾಗೂ ಹರಿದ್ವಾರದ 24 ಪುರೋಹಿತರಿಂದ ದೀಪಯಜ್ಞ ಮತ್ತು ಅರ್ಜೈಂಟಿನಾ ದೇಶದ 15 ಯೋಗ ಸಾಧಕರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಮುಖಂಡ ಬಾದಾಮಿ ಕರಿಬಸಪ್ಪ, ‘ಅಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ 123 ವರ್ಷದ ಹಿರಿಯ ಯೋಗ ಸಾಧಕ ಸ್ವಾಮಿ ಶಿವಾನಂದಜಿ, ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಸ್ಪೇನ್ ದೇಶದ ಯೋಗಿನಿ ಪಾವೊಲಾ ಅಲೆಜಾಂದ್ರ ರಿಯೋಸ್, ಅರ್ಜೈಂಟಿನಾದ ಯೋಗಿ ಜಾರ್ಜ್ ಬಿದಾಂದೋ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್, ಇಳಕಲ್ನ ಗುರುಮಹಾಂತ ಸ್ವಾಮೀಜಿ, ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಏಕಗಮ್ಯಾನಂದ ಜಿ, ಬಾಗಲಕೋಟೆಯ ನಿಸರ್ಗ ಚಿಕಿತ್ಸಾ ಕೇಂದ್ರದ ಬಸವಲಿಂಗ ಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಪೀಠದ ನೂತನ ದಾಸೋಹ ಮಂದಿರವನ್ನು ಇದೇ ವೇಳೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ದೊಡ್ಡಪ್ಪ, ಕಾಶಿನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.