ಮಲೇಬೆನ್ನೂರು: ‘ಬೇಸಿಗೆ ಹಂಗಾಮಿಗೆ ನೀರು ಬಿಡುಗಡೆ ಮಾಡಲು ಕೇವಲ ನಾಲ್ಕು ದಿನಗಳು ಬಾಕಿಯಿದ್ದು, ಮುಖ್ಯ ನಾಲೆ ಹೂಳೆತ್ತುವ ಕೆಲಸ ಆಮೆಗತಿಯಲ್ಲಿ ಸಾಗಿದೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ ಭಾನುವಾರ ಆರೋಪಿಸಿದರು.
‘ಕೊನೆಭಾಗಕ್ಕೆ ನೀರು ತಲುಪಬೇಕೆಂದರೆ ತ್ವರಿತವಾಗಿ ಕಾಮಗಾರಿ ನಡೆಯಬೇಕು. ಆದರೆ, ಗುತ್ತಿಗೆದಾರರು ಕೇವಲ ಒಂದು ಯಂತ್ರವನ್ನು ಮಾತ್ರ ಬಳಸುತ್ತಿದ್ದಾರೆ. ಸರಿಯಾಗಿ ಹೂಳು ಎತ್ತಿಸಿಲ್ಲ. ದಂಡೆ ಮೇಲೆ ಕೆಲವೆಡೆ ಹೂಳನ್ನು ಸಂಗ್ರಹಿಸಿದ್ದು, ಮಳೆ ಬಂದರೆ ಮತ್ತೆ ನಾಲೆಯನ್ನು ಅದು ಸೇರಲಿದೆ’ ಎಂದರು.
ಎಂಜಿನಿಯರ್ಗಳು ನಿರ್ಲಕ್ಷ್ಯ ಮಾಡಿದರೆ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ಆಂತರಿಕ ಸರದಿ, ವಾರಾಬಂದಿ ವೇಳೆ ಉಪನಾಲೆ ಹೂಳು ಎತ್ತಿ. ಮೊದಲು ಮುಖ್ಯನಾಲೆ ಕಡೆ ಗಮನ ಹರಿಸಿ ಎಂದು ತಾಕೀತು ಮಾಡಿದರು.
ಜ. 5ರಂದು ನಿಯಂತ್ರಣ ಎರಡರಿಂದ ಕೊನೆಭಾಗದ ತನಕ ರೈತ ಸಂಘದ ಪದಾಧಿಕಾರಿಗಳು ಪ್ರವಾಸ ಮಾಡಲಿದ್ದಾರೆ. ನಾಲೆಯಲ್ಲಿ ಹೂಳು ಕಂಡುಬಂದರೆ ಗುತ್ತಿಗೆದಾರರ ಬಿಲ್ ತಡೆಹಿಡಿಯುವಂತೆ ಮನವಿ ಮಾಡಲಾಗುವುದು ಎಂದರು.
ಆಂತರಿಕ ಸರದಿಗೆ ಸಭೆ ಕರೆಯಿರಿ: ಕರ್ನಾಟಕ ನೀರಾವರಿ ನಿಗಮದ ಮೂರನೇ ವಿಭಾಗದ ಬಸವಾಪಟ್ಟಣ, ಮಲೇಬೆನ್ನೂರು ಹಾಗೂ ಸಾಸ್ವೆಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಆಂತರಿಕ ಸರದಿ ರೂಪಿಸುವ ಮುನ್ನ ಜಿಲ್ಲಾಧಿಕಾರಿಗಳು, ಅಧೀಕ್ಷಕ ಎಂಜಿನಿಯರ್, ಕಾಡಾ ಅಧ್ಯಕ್ಷರು, ನೀರು ಬಳಕೆದಾರರು, ರೈತ ಸಂಘದವರನ್ನು ಒಳಗೊಂಡಂತೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಭದ್ರಾನಾಲೆಗೆ ಆಶ್ರಯ ಕಾಲೊನಿ ಸೇರಿ ಕೆಲವು ಪ್ರದೇಶಗಳ ಚರಂಡಿ ನೀರು ಸೇರಿ ಮಲಿನಗೊಳ್ಳುತ್ತಿದೆ. ನಾಲೆಗೆ ಚರಂಡಿ ಸೇರುವುದನ್ನು ತಡೆಯದೆ ಇದ್ದಲ್ಲಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ರೈತ ಸಂಘದ ಕೆ.ಎನ್.ಹಳ್ಳಿ ಪ್ರಭುಗೌಡ, ಕಡ್ಲೆಗೊಂದಿ ಬಸಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.