ADVERTISEMENT

ಶಿಲ್ಪಕಲಾ ಕಲಿಕಾ ಕೇಂದ್ರ ಆರಂಭಿಸಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 8:58 IST
Last Updated 2 ಜನವರಿ 2018, 8:58 IST

ದಾವಣಗೆರೆ: ಸರ್ಕಾರ ಶಿಲ್ಪಕಲಾ ಕಲಿಕಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಮರೆಯಾಗುತ್ತಿರುವ ಕರ್ನಾಟಕ ಮೂಲದ ಹೊಯ್ಸಳ ಶಿಲ್ಪಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಚಿಕ್ಕಬಳ್ಳಾಪುರ ಜ್ಞಾನಾನಂದ ಆಶ್ರಮ ವಿಶ್ವಕರ್ಮ ಪೀಠದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.

ನಗರದ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮಾಜ ತಮ್ಮ ಪಂಚಕರ್ಮ ಕಲೆಯ ಮೂಲಕ ವೇದಗಳ ಕಾಲದಿಂದಲೂ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದೆ. ಕಣ್ಣಿಗೆ ಕಾಣದ ಶಕ್ತಿಯನ್ನು ಮನಸ್ಸಿನಲ್ಲಿ ಆರಾಧಿಸಿಕೊಂಡು ಲೋಕ ಕಲ್ಯಾಣಕ್ಕೆ ಮೂರ್ತಿ ನೀಡುವ ಕಲೆ ನಮ್ಮ ಸಮಾಜಕ್ಕಿದೆ. ಜಗತ್ತಿನ ಎಲ್ಲಾ ಧರ್ಮದ ದೇವಾಲಯಗಳನ್ನು ಕಟ್ಟುತ್ತಾ ಧರ್ಮಾತೀತವಾಗಿ ಬೆಳೆದಿದ್ದು, ಕೇವಲ ಹೊಟ್ಟೆಪಾಡಿಗಾಗಿ ಕಲೆಯನ್ನು ಬಳಸದೇ ಭಗವಂತನ ಆರಾಧನೆಗೆ ಮುಡಿಪಿಟ್ಟಿದೆ. ಹಾಗಿಯೇ ಇಂದಿಗೂ ಭಾರತದ 600ಕ್ಕೂ ಹೆಚ್ಚಿನ ದೇವಸ್ಥಾನಗಳ ಶಿಲ್ಪ ಕಲೆಯಲ್ಲಿ ಕಾಣಬಹುದು’ ಎಂದರು.

ADVERTISEMENT

ಹೊಯ್ಸಳ ಶಿಲ್ಪಕಲೆಯನ್ನು ಕೇವಲ ನಮ್ಮ ನಾಡಿಗೆ ಸೀಮಿತಗೊಳಿಸದೆ ವಿಶ್ವದಾದ್ಯಂತ ಪರಿಚಯಿಸಿದ ಕೀರ್ತಿ ವಿಶ್ವಕರ್ಮರಿಗಿದೆ. ಆದರೆ ಇಂದು ನಮ್ಮ ಸಮಾಜದ ಜನರಿಗೆ ಸರಿಯಾದ ಪ್ರೋತ್ಸಾಹ ದೊರಕದೆ ಹೊಯ್ಸಳ ಶಿಲ್ಪಕಲೆ ಮರೆಯಾಗುತ್ತಿದೆ. ಇನ್ನು ಮುಜರಾಯಿ ಇಲಾಖೆಯು ನಮ್ಮ ರಾಜ್ಯದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬೇರೆ ರಾಜ್ಯದ ಶಿಲ್ಪಿಗಳಿಗೆ ಆದ್ಯತೆ ನೀಡುತ್ತಿದೆ. ಅಮರಶಿಲ್ಪಿ ಜಕಣಾಚಾರಿ ಮತ್ತವರ ಕೊಡುಗೆಗಳ ಕುರಿತು ಮುಂದಿನ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ನಗರದ ಯಾವುದಾದರೂ ಒಂದು ವೃತ್ತಕ್ಕೆ ಜಕಣಾಚಾರಿಯವರ ಹೆಸರಿಡಲು ಅನೇಕ ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಜನಪ್ರತಿನಿಧಿಗಳು ಸ್ವಂದಿಸುತ್ತಿಲ್ಲ ಎಂದು ತಿಳಿಸಿದರು. ಆವರಗೊಳ್ಳ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಶಿಲ್ಪಕಲೆಯು ಕಲ್ಲಿನಲ್ಲಿ ಅರಳುವ ಕಲಾ ಕುಸುಮವಾಗಿದೆ. ತನ್ನದೇ ಆದ ವೈಶಿಷ್ಟ್ಯಗಳ ಮೂಲಕ ಸಮಾಜದ ಮೇಲ್ಪಂಕ್ತಿಯಲ್ಲಿರುವ ವಿಶ್ವಕರ್ಮರ ಕರ ಕುಶಲತೆಗೆ ಸರಿಸಾಟಿಯಾದ ಜನಾಂಗ ಇನ್ನೊಂದಿಲ್ಲ. ಅವರ ಕಲಾ ಸೇವೆ ನಾಡಿನ ಎಲ್ಲಾ ದೇವಸ್ಥಾನಗಳಲ್ಲೂ ರಾರಾಜಿಸುತ್ತಿದೆ. ಇಂತಹ ಸಮಾಜಕ್ಕೆ ಪ್ರಾಧಿಕಾರವನ್ನು ಸ್ಥಾಪಿಸುವ ಮೂಲಕ ಸಮಾಜದ ಅನೇಕ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವಾಲಿ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ.ಮರಿಯಾಚಾರ್, ಗೌರವಾ ಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್‌, ಮಾಯಕೊಂಡದ ಎಸ್‌.ನಾಗರಾಜಾಚಾರ್‌ ಅವರೂ ಇದ್ದರು.

* * 

ಪ್ರಧಾನಿ ಮೋದಿ ಅವರು ವಿಶ್ವಕರ್ಮ ಜಯಂತಿಯಂದು ನಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸಿಸುವ ಮೂಲಕ ಸಮಾಜದ ಸ್ಥಾನಮಾನವನ್ನು ಎತ್ತಿಹಿಡಿದಿದ್ದಾರೆ.
ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ವಿಶ್ವಕರ್ಮ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.