ಚನ್ನಗಿರಿ: ದೇಶವನ್ನು ಕಟ್ಟುವ ಕೆಲಸ ಅತ್ಯಂತ ಕಠಿಣವಾದದ್ದು. ಆದರೆ ದೇಶ ಒಡೆಯುವ ಕಾರ್ಯ ತುಂಬಾ ಸುಲಭವಾಗಿರುತ್ತದೆ. ಆದ್ದರಿಂದ ಭಾರತೀಯರಾದ ನಾವು ದೇಶ ಕಟ್ಟುವ ಕಾರ್ಯ ಮಾಡಬೇಕೇ ಹೊರತು ದೇಶ ಒಡೆಯುವ ಕಾರ್ಯ ಮಾಡಬಾರದು ಎಂದು ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ್ಯ ವಿಭಾಗದ ಸಂಘಟನಾ ಕಾರ್ಯದರ್ಶಿ ಸುರೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಂಕ್ರಾಂತಿ ಉತ್ಸವ ಹಾಗೂ ಶಾಖಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಚಿತ್ರಕಾರಿ ಶಕ್ತಿಗಳು ಸದಾ ದೇಶದಲ್ಲಿ ಭಯೋತ್ಪಾದನೆ ಉಂಟು ಮಾಡುವ ಮೂಲಕ ದೇಶವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ದೇಶ ಒಡೆಯುವ ಕಾರ್ಯದಲ್ಲಿ ತೊಡಗಿರುವ ಭಯೋತ್ಪಾದಕರನ್ನು ದೇಶದಿಂದ ಹೊರಗೆ ಕಳುಹಿಸಬೇಕಾಗಿದೆ. ಇದಕ್ಕೆ ಸಾರ್ವಜನಿಕರು ಅಂದರೆ ದೇಶವಾಸಿಗಳ ಸಹಕಾರ ತುಂಬಾ ಅಗತ್ಯವಾಗಿ ಬೇಕಾಗಿದೆ. ಭಯೋತ್ಪಾದನೆಯನ್ನು ತಡೆಗಟ್ಟುವ ಕಾರ್ಯ ಕೇವಲ ಯೋಧರಿಂದ ಮಾತ್ರ ಸಾಧ್ಯವಾಗುವುದಿಲ್ಲ ಎಂದರು.
ಯೋಧರು ಮಾಡುವ ಕಾರ್ಯಕ್ಕೆ ನಾವೆಲ್ಲಾ ಕೈ ಜೋಡಿಸಬೇಕಾಗಿದೆ. ಭಯೋತ್ಪಾದನೆ ತಡೆಗಟ್ಟುವುದಕ್ಕೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ನಮ್ಮಲ್ಲಿ ದೇಶಪ್ರೇಮ ಹಾಗೂ ದೇಶಸೇವೆ ಮಾಡುವ ಮನೋಭಾವನೆ ಹೊಂದುವುದು ಅಗತ್ಯವಾಗಿದೆ ಎಂದು ಹೇಳಿದರು.
ಆರ್ಎಸ್ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ನಗರ ಘಟಕದ ಮಂಜುನಾಥ್ ಕಾಳೆ ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದರು. ಪಥ ಸಂಚಲನ ಹಾದು ಹೋದ ರಸ್ತೆಗಳಲ್ಲಿ ಮಹಿಳೆಯರು ರಂಗು ರಂಗಿನ ರಂಗೋಲಿ ಹಾಕಿ ಪಥ ಸಂಚಲವನ್ನು ಸ್ವಾಗತಿಸಿದರು. ರಸ್ತೆ ಬದಿಗಳಲ್ಲಿ ನಿಂತು ಜನರು ಪಥ ಸಂಚಲವನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.