ADVERTISEMENT

‘ಸಂಪುಟದಿಂದ ಸಚಿವ ಹೆಗಡೆ ವಜಾಗೊಳಿಸಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:55 IST
Last Updated 6 ಫೆಬ್ರುವರಿ 2018, 9:55 IST

ದಾವಣಗೆರೆ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಸಚಿವರ ಅಣಕು ಸಮಾಧಿ ಮಾಡಿ ಪ್ರತಿಭಟನೆ ನಡೆಸಿದರು.

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಶ್ವದಲ್ಲೇ ವಿಶೇಷ ಸ್ಥಾನ ಹೊಂದಿರುವ ಭಾರತದ ಸಂವಿಧಾನವನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಬದಲಾಯಿಸುವುದಾಗಿ ಸಚಿವ ಹೆಗಡೆ ನೀಡಿದ ಹೇಳಿಕೆ ಆಘಾತಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಕಾಣುವ ಹಾಗೂ ತುಳಿತಕ್ಕೆ ಒಳಗಾದವರಿಗೆ ವಿಶೇಷ ಸ್ಥಾನವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ಭಾರತದ ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ಆದರೆ, ಹೆಗಡೆಗೆ ಕೋಮುವಾದ ಮತ್ತು ಜಾತಿವಾದದ ಮೇಲಷ್ಟೆ  ನಂಬಿಕೆ. ಅವರು ಅಶಾಂತಿ ಮೂಡಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ’
ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಬಿ.ಎಚ್‌.ವೀರಭದ್ರಪ್ಪ, ವೀರಣ್ಣ, ಮೇಯರ್ ಅನಿತಾಬಾಯಿ, ಸದಸ್ಯರಾದ ಹಾಲೇಶ್, ಬಸಣ್ಣ, ಅಶ್ವಿನಿ ಪ್ರಶಾಂತ್, ಶಿವನಹಳ್ಳಿ ರಮೇಶ್ ಅವರೂ ಪಾಲ್ಗೊಂಡಿದ್ದರು.

ಚಪ್ಪಲಿಯಿಂದ ಹೊಡೆದರು

ಪ್ರತಿಭಟನೆ ನಡೆಸಿದ ಮುಖಂಡರು ಸಚಿವ ಹೆಗಡೆ ಅಣಕು ಸಮಾಧಿ ಮಾಡಿದರು. ಅದರ ಮೇಲೆ ಕಾಲಿಟ್ಟರು. ನಂತರ ಹೆಗಡೆ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.