ADVERTISEMENT

ಹೊಸ ಮೋಟರ್ ಅಳವಡಿಸಲು ₹ 7 ಕೋಟಿ

ಉಬ್ರಾಣಿ ಏತ ನೀರಾವರಿ: ಮೋಟರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:40 IST
Last Updated 2 ಜುಲೈ 2021, 4:40 IST
ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಮೋಟರ್‌ ಅನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಗುರುವಾರ ಚಾಲನೆ ಮಾಡಿದರು.
ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಮೋಟರ್‌ ಅನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಗುರುವಾರ ಚಾಲನೆ ಮಾಡಿದರು.   

ಚನ್ನಗಿರಿ: ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲುನಾಲ್ಕೈದು ತಿಂಗಳಲ್ಲಿ ಹೊಸ ಮೋಟರ್‌ಗಳನ್ನು ಅಳವಡಿಸಲು ₹ 7 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ತಾಲ್ಲೂಕಿನ ಮೊದಲನೇ ಹಂತದ ಜಾಕ್‌ವೆಲ್ ಬಳಿ ಇರುವ ಪಂಪ್‌ಹೌಸ್‌ನಲ್ಲಿ ಗುರುವಾರ ಉಬ್ರಾಣಿ
ಏತ ನೀರಾವರಿ ಯೋಜನೆ ಅಡಿ
ಕೆರೆಗಳನ್ನು ತುಂಬಿಸಲು ಮೋಟರ್ ಚಾಲನೆ ಮಾಡಿ ಮಾತನಾಡಿದರು.

ಜೂನ್ 1ರಿಂದ ಮೋಟರ್‌ಗಳನ್ನು ಚಾಲನೆ ಮಾಡಬೇಕಾಗಿತ್ತು. ಮೋಟರ್ ಅಳವಡಿಸಿ 11 ವರ್ಷಗಳು ಆಗಿರುವುದರಿಂದ ತಾಂತ್ರಿಕ ಸಮಸ್ಯೆಯಿಂದ ಹಾಗೂ ಕೋವಿಡ್ ಲಾಕ್‌ಡೌನ್‌ ಪ್ರಯುಕ್ತ ಇಂದು ಮೋಟರ್‌ ಚಾಲನೆ ಮಾಡಲಾಗಿದೆ. 8 ತಿಂಗಳ ಕಾಲ ನಿರಂತರವಾಗಿ ಭದ್ರಾ ನದಿಯ ನೀರನ್ನು ಕೆರೆಗಳಿಗೆ ತುಂಬಿಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು. ನಮ್ಮ ತಾಲ್ಲೂಕಿನ ರೈತರು ಸಹಕಾರವನ್ನು ನೀಡಿದರೆ ಮುಂದಿನ ವರ್ಷ ಮಾರ್ಚ್ವರೆಗೆ ಕೆರೆಗಳಿಗೆ ನೀರು ಹರಿಸಲು ಅಗತ್ಯವಾದ ಕ್ರಮ ಕೈಗೊಳ್ಳಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ತಾಲ್ಲೂಕಿನ ಹೊದಿಗೆರೆ, ವಡ್ನಾಳ್, ಹೆಬ್ಬಳಗೆರೆ ಹಾಗೂ ಗರಗ ಗ್ರಾಮದ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಲು ₹ 9.54 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿ ಮುಕ್ತಾಯದ ಹಂತವನ್ನು ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಉಬ್ರಾಣಿ ಏತ ನೀರಾವರಿ ರಾಜ್ಯದಲ್ಲಿಯೇ ಅತ್ಯಂತ ಯಶಸ್ವಿಯಾದ ಏತ ನೀರಾವರಿ ಯೋಜನೆ. ಹಾಗೆಯೇ ಕಗ್ಗಿ ಸೀರಿಸ್‌ನಿಂದ ಹೊನ್ನೇಬಾಗಿ ಗ್ರಾಮದ ಕೆರೆ ತುಂಬಿಸಲು ₹ 9 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ರೈತರು ತಾಳ್ಮೆಯಿಂದ ಇದ್ದು, ಸಹಕಾರವನ್ನು ನೀಡಿದರೆ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ಇಇ ಸುರೇಶ್, ಎಇಇ ಹರೀಶ್, ರೈತ ಮುಖಂಡರಾದ ರವಿಕುಮಾರ್, ಮಲ್ಲೇಶಪ್ಪ, ರಾಜೇಶ್ ನೆಲ್ಲಿಹಂಕಲು, ಶಿವಕುಮಾರ್ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.