ADVERTISEMENT

ದಾವಣಗೆರೆ: 83 ಅಂಗವಿಕಲರಿಗೆ ಉದ್ಯೋಗ ಭರವಸೆ

ಮಳೆಯನ್ನೂ ಲೆಕ್ಕಿಸದೇ ಉದ್ಯೋಗ ಮೇಳದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:04 IST
Last Updated 21 ಮೇ 2022, 4:04 IST
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಅಂಗವಿಕಲರ ಉದ್ಯೋಗ ಮೇಳವನ್ನು ಜಿಲ್ಲಾ ಪಂಚಾಯಿತಿ ಸಿಇಒ ಎ.ಚನ್ನಪ್ಪ ಉದ್ಘಾಟಿಸಿದರು. ಸಿ.ಆರ್.ಸಿ ಕೇಂದ್ರದ ನಿರ್ದೇಶಕ ಡಾ.ಉಮಾಶಂಕರ್, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಡಾ.ಮಹಾಂತೇಶ್ ಕಿವಡಸಣ್ಣವರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ ಇದ್ದರು.
ದಾವಣಗೆರೆಯಲ್ಲಿ ಶುಕ್ರವಾರ ನಡೆದ ಅಂಗವಿಕಲರ ಉದ್ಯೋಗ ಮೇಳವನ್ನು ಜಿಲ್ಲಾ ಪಂಚಾಯಿತಿ ಸಿಇಒ ಎ.ಚನ್ನಪ್ಪ ಉದ್ಘಾಟಿಸಿದರು. ಸಿ.ಆರ್.ಸಿ ಕೇಂದ್ರದ ನಿರ್ದೇಶಕ ಡಾ.ಉಮಾಶಂಕರ್, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಡಾ.ಮಹಾಂತೇಶ್ ಕಿವಡಸಣ್ಣವರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ ಇದ್ದರು.   

ದಾವಣಗೆರೆ: ಇಲ್ಲಿನ ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಶುಕ್ರವಾರ ಅಂಗವಿಕಲರಿಗೆ ಆಯೋಜಿಸಿದ್ದ ದಾವಣಗೆರೆ ವಿಭಾಗ ಮಟ್ಟದ ಉದ್ಯೋಗ ಮೇಳ ಯಶಸ್ವಿಯಾಯಿತು.

22 ಕಂಪನಿಗಳು ಕಂಪನಿಗಳು ಭಾಗವಹಿಸಿದ್ದ ಈ ಉದ್ಯೋಗ ಮೇಳದಲ್ಲಿ 350ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದು 83 ಅಂಗವಿಕಲರಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ನೀಡಲಾಯಿತು.

ನೋಂದಾಯಿಸಿಕೊಂಡಿದ್ದ ಆಕಾಂಕ್ಷಿಗಳನ್ನು ಶ್ರವಣದೋಷ, ದೃಷ್ಟಿದೋಷ ಹಾಗೂ ದೈಹಿಕ ನ್ಯೂನತೆಗಳಿರುವ ಅಂಗವಿಕಲರನ್ನು ವಿಂಗಡಣೆ ಮಾಡಿ ಕಳುಹಿಸಲಾಯಿತು. ಅಂವಿಕಲರು ಕೈ ಸಂಜ್ಞೆ, ಬಾಯಿ ಸಂಜ್ಞೆಯ ಮೂಲಕ ತಮ್ಮದೇ ಆದ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅಂಗವಿಕಲರ ಜೊತೆ ಬಂದಿದ್ದ ಪೋಷಕರು ಅವರಿಗೆ ಆತ್ಮವಿಶ್ವಾಸ ತುಂಬಿದರು.

ADVERTISEMENT

ಸಮರ್ಥನಂ ಅಂಗವಿಕಲರ ಸಂಸ್ಥೆಯು ಬಾಕ್ರ್ಲೇನ್ ಸಹಕಾರದೊಂದಿಗೆ ಆಯೋಜಿಸಿದ್ದ ಈ ಮೇಳದಲ್ಲಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ವಿಜಯನಗರವಲ್ಲದೇ ದೂರದ ಹಾಸನ ಜಿಲ್ಲೆಯಿಂದಲೂ ಉದ್ಯೋಗಾಂಕ್ಷಿಗಳು ‌ಮಳೆಯನ್ನು ಲೆಕ್ಕಿಸದೆ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಬುದ್ಧಿಮಾಂದ್ಯ ಹಾಗೂ ಬಹು ಅಂಗತ್ವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗಿತ್ತು.

‘ಶ್ರವಣದೋಷ ಉಳ್ಳವರಿಗೆ ರೀಟೆಲ್ ಕ್ಷೇತ್ರಗಳಲ್ಲಿ ಹೆಚ್ಚು ಅವಕಾಶಗಳು ಇದ್ದು, ಫ್ಲಿಫ್‌ಕಾರ್ಟ್, ಅಮೇಜಾನ್ ಹಾಗೂ ಮಾಲ್‌ಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ವಸ್ತುಗಳ ವಿಂಗಡಣೆಯಲ್ಲಿ ಶ್ರವಣದೋಷವುಳ್ಳವರು ಮಾಮೂಲಿ ವ್ಯಕ್ತಿಗಳಿಗಿಂತಲೂ ಚೆನ್ನಾಗಿ ಕೆಲಸ ಮಾಡಬಲ್ಲರು. ದೃಷ್ಟಿದೋಷವುಳ್ಳವರಿಗೆ ಬಿಲ್ಲಿಂಗ್‌ನಲ್ಲಿ ಹಾಗೂ ದೈಹಿಕ ನ್ಯೂನತೆವುಳ್ಳವರಿಗೆ ವರ್ಕ್‌ಫ್ರಮ್ ಹೋಂನಲ್ಲಿ ಅವಕಾಶಗಳು ಇವೆ. ಟೆಲಿಕಾಲಿಂಗ್‌ನಲ್ಲಿ ಕೆಲಸ ಮಾಡುವರು’ ಎಂದು ಕೇಂದ್ರದ ಶಿವರಾಜು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಎ.ಚನ್ನಪ್ಪ ಮಾತನಾಡಿ, ‘ಅಂಗವಿಕಲರು ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವಿದೆ. ಯಾವುದೇ ಆತಂಕವಿಲ್ಲದೆ ಉತ್ಪಾದನಾ ಕ್ಷೇತ್ರದ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಅಂಗವಿಕಲರು ಉದ್ಯಮಿಗಳಾಗಿ ಬೆಳೆದು ಸ್ವಂತ ಕಾಲಿನಲ್ಲಿ ನಿಲ್ಲಿಬೇಕು’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಡಾ.ಮಹಾಂತೇಶ್ ಕಿವಡಸಣ್ಣವರ್, ‘ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಂಗವಿಕಲರ ವೈಯಕ್ತಿಕ ಸ್ವಾವಲಂಬನೆಯ ಮೂಲಕ ಪ್ರಮುಖ ಹೆಜ್ಜೆ ಇಡಲು ಸಹಾಯ ಮಾಡುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ, ಸಮರ್ಥನಂ ಇಂಗ್ಲೆಂಡ್‌ ಶಾಖೆಯ ನಿರ್ದೇಶಕ ಹೇಮಂತ್ ಗಣೇಶ ಗುಡಿ, ಸಿ.ಆರ್.ಸಿ ಕೇಂದ್ರದ ನಿರ್ದೇಶಕ ಡಾ.ಉಮಾಶಂಕರ್, ಸಂಸ್ಥೆಯ ಕೆ. ಸತೀಶ್, ಚಂದ್ರಶೇಖರ್, ಮಲ್ಲಿಕಾರ್ಜುನ ಗೌಡ, ದೇವರಾಜು, ಐನ್‌ಸ್ಟಿನ್, ಸುಭಾಶ್ ಚಂದ್ರ, ವೀರಭದ್ರಪಾಟೇಲ್, ಜೆಸ್ಟಿನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.